ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿ, ’ಸಂವಿಧಾನ ಬಿಟ್ಟು ಯಾರ ಮಾತೂ ಕೇಳಲ್ಲ’
11 ಅತೃಪ್ತ ಶಾಸಕರ ವಿಚಾರಣೆ ನಂತರ ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಇವತ್ತೇ ನಿರ್ಣಯ ನೀಡಲಿದ್ದಾರೆ ಎಂಬ ಮಾತಿಗೆ ತೆರೆ ಎಳೆದಿದ್ದು ಸಂವಿಧಾನ ಬದ್ಧವಾಗಿ ನಡೆದುಕೊಳ್ಳುತ್ತಿದ್ದೇನೆ ಎಂದು ಪುನರ್ ಉಚ್ಛಾರಣೆ ಮಾಡಿದ್ದಾರೆ.
ಬೆಂಗಳೂರು[ಜು. 11] ಅತೃಪ್ತ ಶಾಸಕರ ರಾಜೀನಾಮೆ ವಿಚಾರಣೆ ನಂತರ ಸ್ಪೀಕರ್ ರಮೇಶ್ ಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಹಾಗಾದರೆ ರಮೇಶ್ ಕುಮಾರ್ ಸುದ್ದಿಗೋಷ್ಠಿಯ ಹೈಲೈಟ್ಸ್ ಏನು?
ಈಗ ರಾಜೀನಾಮೆ ಕೊಟ್ಟ 11 ಶಾಸಕರ ಬಗ್ಗೆ ನಿರ್ಧಾರ ಆಗಿಲ್ಲ. ಇಡೀ ರಾತ್ರಿ ನಾನು ಯೋಚನೆ ಮಾಡಿ ನಿರ್ಧಾರ ಮಾಡುತ್ತೇನೆ. ನನಗೆ ಮನವರಿಕೆ ಆದ ಬಳಿಕವೇ ಈ ಬಗ್ಗೆ ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದು ಯಾವುದೇ ಸ್ಪಷ್ಟ ತೀರ್ಮಾನ ಪ್ರಕಟ ಮಾಡಿಲ್ಲ. ಈ ಮೂಲಕ ದೋಸ್ತಿ ಸರಕಾರಕ್ಕೆ ಮತ್ತಷ್ಟು ಆಕ್ಸಿಜನ್ ನೀಡಿದ್ದಾರೆ.
ಸ್ಪೀಕರ್ ವಿಚಾರಣೆಗೆ ಹಾಜರಾದ 11 ಶಾಸಕರ ಪಟ್ಟಿ.. ನಿಮ್ಮವರಿದ್ದಾರಾ?
ಶಾಸಕರ ರಾಜೀನಾಮೆ ಸ್ವಇಚ್ಛೆಯಿಂದಲೋ, ಸ್ವಯಂಪ್ರೇರಣೆಯೋ ಗೊತ್ತಾಗಬೇಕಿದೆ. ಸುಪ್ರೀಂ ಕೋರ್ಟ್ ಯಾವುದಾದರೂ ಒಂದು ತೀರ್ಮಾನ ಮಾಡಲು ಹೇಳಿದೆ. ಸುಪ್ರೀಂಕೋರ್ಟ್ ನನಗೆ ಹೀಗೆಯೇ ಮಾಡಿ ಎಂದು ಹೇಳಿಲ್ಲ. ನಾನು ಏನು ಮಾಡ್ತೇನೆ ಎಂದು ಸುಪ್ರೀಂಗೆ ತಿಳಿಸುತ್ತೇನೆ. ಜತೆಗೆ ಇಂದಿನ ಎಲ್ಲ ಘಟನಾವಳಿಗಳನ್ನು ವಿಡಿಯೋ ರೇಕಾರ್ಡ್ ಮಾಡಿದ್ದೇನೆ.
ನಿಯಮ ಮತ್ತು ಸಂವಿಧಾನವನ್ನು ಬಿಟ್ಟು ನಾನು ಹಿಂದೆ ಸರಿಯುವುದಿಲ್ಲ. ಸಕಲ ವಿಚಾರಗಳು ನನಗೆ ಮನವರಿಕೆಯಾದ ಮೇಲೆ ತೀರ್ಮಾನ ಮಾಡುತ್ತೇನೆ ಎನ್ನುವ ಮೂಲಕ ರಾಜೀನಾಮೆ ಅಂಗೀಕಾರ ಆಗಿದೆಯೋ? ಇಲ್ಲವೋ? ಎಂದು ವಾರದಿಂದ ಚರ್ಚೆ ಆಗುತ್ತಿದ್ದ ಪ್ರಶ್ನೆಯನ್ನು ಹಾಗೆ ಉಳಿಸಿದರು. ಈ ಪ್ರಕರಣ ಮತ್ತೆ ಸುಪ್ರೀಂನಲ್ಲಿ ನಾಳೆ ಅಂದರೆ ಜುಲೈ 12 ರಂದು ವಿಚಾರಣೆಗೆ ಬರಲಿದೆ.