ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ 14 ತಿಂಗಳ ಕಾಲ ಸ್ಪೀಕರ್ ಆಗಿ ನಿರ್ವಹಿಸಿದ್ದ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜಕೀಯ ಏರುಪೇರನ್ನು ಸಮರ್ಥವಾಗಿ ನಿಭಾಯಿಸಿ ತಮ್ಮ ಸ್ಥಾನ ತೊರೆದಿರುವುದಾಗಿ ಹೇಳಿ, ಸದನದಿಂದ ಹೊರ ನಡೆದರು ರಮೇಶ್ ಕುಮಾರ್.

ಬೆಂಗಳೂರು [ಜು.29] :  ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಂಡಿದ್ದ ರಮೇಶ್ ಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. 

Add Asianetnews Kannada as a Preferred SourcegooglePreferred

2018ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದ ರಮೇಶ್ ಕುಮಾರ್ ಅವರನ್ನು ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಸ್ಪೀಕರ್ ಆಗಿ ನೇಮಿಸಿತ್ತು. ಇದೀಗ ಮೈತ್ರಿ ಸರಕಾರವೂ ಅಧಿಕಾರ ಕಳೆದುಕೊಂಡಿದ್ದು, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ. ಬದಲಾದ ರಾಜಕೀಯ ಸನ್ನಿವೇಶದನಲ್ಲಿ ಸ್ಪೀಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.

ರಾಜೀನಾಮೆಗೂ ಮುನ್ನ ವಿದಾಯ ಭಾಷಣ ಮಾಡಿದ ರಮೇಶ್ ಕುಮಾರ್ ತಮ್ಮ ಅಧಿಕಾರಾವಧಿಯ ಹಲವು ಏರುಪೇರುಗಳ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯ ರಾಜಕೀಯ ಚಟುವಟಿಕೆಯಿಂದ ನೊಂದಿದ್ದು, ನಾಲ್ಕು ದಶಕಗಳ ರಾಜಕೀಯ ಜೀವನ ಅಂತಿಮ ಘಟ್ಟಕ್ಕೆ ಬಂದಿದೆ. ಸೋಮವಾರ ಅಚ್ಚರಿ ಹೇಳಿಕೆ ನಿಡುತ್ತೇನೆ ಎಂದಿದ್ದ ಸ್ಪೀಕರ್ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಗೆದ್ದ ನಂತರ ತಮ್ಮ ಸ್ಥಾನವನ್ನು ತೆರವುಗೊಳಿಸುತ್ತಿರುವುದಾಗಿ ಸದನಲ್ಲಿ ಘೋಷಿಸಿ, ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.

ವಿಶ್ವಾಸಮತ ಗೆದ್ದ ಯಡಿಯೂರಪ್ಪ: ಧ್ವನಿಮತದ ಮೂಲಕ ಅಂಗೀಕಾರ

ಕಳೆದ 14 ತಿಂಗಳು 4 ದಿವಸಗಳ ಕಲಾ ಸಭಾಧ್ಯಕ್ಷನಾಗಿ, ನನ್ನ ಕರ್ತವ್ಯವನ್ನು ಸಂವಿಧಾನ ಬದ್ದವಾಗಿ ನಿಷ್ಠೆಯಿಂದ ನಿರ್ವಹಿಸಿದ್ದೇನೆ. ನಾನು ಶಕ್ತಿ ಮೀರಿ ಕಾರ್ಯ ನಿರ್ವಹಿಸಿದ್ದೇನೆ. ಕೆಲವೊಮ್ಮೆ ಬಹಳ ವಿವೇಚನೆಯಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ನಾವು ಸಣ್ಣವರು. ಆದರೆ ಅಲಂಕರಿಸುವ ಈ ಸ್ಥಾನ ದೊಡ್ಡದು. ನಾವು ಈ ಸ್ಥಾನಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಬೇಕು ಎಂದು ತಮ್ಮ ವಿದಾಯ ಭಾಷಣದಲ್ಲಿ ರಮೇಶ್ ಹೇಳಿದರು. 

ನಿಮಗೆಲ್ಲಾ ಕಾದಿದೆ ಅಚ್ಚರಿ : ಕುತೂಹಲ ಸೃಷ್ಟಿಸಿದ ಸ್ಪೀಕರ್ ಹೇಳಿಕೆ

 ನಾನೂ ಏನನ್ನೂ ಕೇಳಲಿಲ್ಲ, ಯಾವ ಸ್ಥಾನವನ್ನೂ ಬಯಸಲಿಲ್ಲ. ರಾಹುಲ್ ಗಾಂಧಿ ಸ್ಪೀಕರ್ ಸ್ಥಾನ ಒಪ್ಪುವಂತೆ ಸೂಚಿಸಿದರು. ಇದರಿಂದ ನಾನು ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಂಡೆ ಎಂದರು. 

ಅನರ್ಹತೆ ಬಗ್ಗೆ ಪ್ರಸ್ತಾಪ: ಎಲ್ಲರ ನಂಬಿಕೆಗೆ ಅರ್ಹನಾಗಿ ಬುದಕಲು ತೀರ್ಪು ನೀಡಿದ್ದೇನೆ. ಈ ನಿಟ್ಟಿನಲ್ಲಿ ಅತೃಪ್ತರು ಅನರ್ಹಗೊಳಿಸಿದ್ದೇನೆ ಎಂದರು. ಇದರಿಂದ ಇತಿಹಾಸ ಸೃಷ್ಟಿಸಿದ್ದೇನೆ ಎನ್ನುವ ಭ್ರಮೆ ನನಗಿಲ್ಲ. ಆದರೆ ಎಲ್ಲರ ವಿಶ್ವಾಸಕ್ಕೆ ಸರಿಯಾದ ರೀತಿ ತೀರ್ಪು ನೀಡಿದ್ದೇನೆ. ಎಲ್ಲರ ಶುಭಾಶಯ ಇರಲಿ ಎಂದು ಬಯಸಿ, ತಮ್ಮ ಆತ್ಮಸಾಕ್ಷಿ ಹೇಳಿದಂತೆ ನನ್ನ ಸ್ಥಾನಕ್ಕೆ ರಾಜೀನಾಮೆ ನಿಡುತ್ತಿದ್ದೇವೆ ಎಂದರು.

ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸುಲಲಿತ ಆಡಳಿತಕ್ಕೆ ಯಾವುದೇ ಹಿನ್ನಡೆಯಾಗದಂತೆ ಸ್ಪೀಕರ್ ನೋಡಿಕೊಂಡಿದ್ದು ವಿಶೇಷ. ಹೊಸ ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ಮತ ಯಾಚನೆಯಲ್ಲಿ ಗೆದ್ದು, ಅಗತ್ಯ ಧನ ವಿನಿಯೋಗ ವಿಧೇಯಕ ಸದನದಲ್ಲಿ ಮಂಡಿಸಿ, ಅಂಗೀಕೃತವಾದ ನಂತರವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದರು ರಮೇಶ್ ಕುಮಾರ್.

"