Asianet Suvarna News Asianet Suvarna News

250 ಕೋಟಿ ವೆಚ್ಚದಲ್ಲಿ ಚಾರ್ಮುಡಿ ಘಾಟ್ ಅಭಿವೃದ್ಧಿ

ರಾಜ್ಯದ ಚಾರ್ಮಾಡಿ ಘಾಟ್ ರಸ್ತೆಯನ್ನು 250 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯ ಪ್ರಸ್ತಾವನೆ ಅಂಗೀಕರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Karnataka seeks Rs 250 crore for Charmadi Ghat road

ಬೆಂಗಳೂರು: ರಾಜ್ಯದ ಚಾರ್ಮಾಡಿ ಘಾಟ್ ರಸ್ತೆಯನ್ನು 250 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯ ಪ್ರಸ್ತಾವನೆ ಅಂಗೀಕರಿಸುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಸೋಮವಾರ ದೆಹಲಿಯಲ್ಲಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಕುಮಾರಸ್ವಾಮಿ ಮತ್ತು ರಾಜ್ಯದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಮನವಿ ಪತ್ರವೊಂದನ್ನು ಸಲ್ಲಿಸಿದರು. 

ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರ  ಸಂಖ್ಯೆ ಹೆಚ್ವಳವಾಗಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸಂಚಾರ ದಟ್ಟಣೆ ಹೆಚ್ಚಳವಾಗುತ್ತಿದೆ. ಎರಡು ಪಥ ರಸ್ತೆಗಳ ನಿರ್ಮಾಣ ಮಾಡುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು 250 ಕೋಟಿ ರು. ವೆಚ್ಚದಲ್ಲಿ ರಸ್ತೆಯ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು, ಈ ಕುರಿತ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಅಲ್ಲದೆ, ನೆಲಮಂಗಲ ಜಂಕ್ಷನ್‌ನಿಂದ ಹಾಸನದವರೆಗೆ ಚತುಷ್ಪಥ ರಸ್ತೆ ಇದ್ದು, ಹಾಸನ ಮತ್ತು ಚನ್ನರಾಯಪಟ್ಟಣ ಸೇರಿದಂತೆ ಹಲವು ಕಡೆ ಗ್ರೇಡ್ ಸಪರೇಟರ್ ನ ಅಗತ್ಯ ಇದೆ. 

ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ- 48ರಲ್ಲಿ ದ್ವಿಪಥದ ಸರ್ವೀಸ್ ರಸ್ತೆ ಅಗತ್ಯ ಇದೆ. ಈ ನಿಟ್ಟಿನಲ್ಲಿ ಕೇಂದ್ರವು ಗಮನಹರಿಸಬೇಕು. ಅಲ್ಲದೇ, ಈಗಾಗಲೇ ಕೇಂದ್ರ ಸಚಿವರು ಬಿಳಿಕೆರೆ ಮೂಲಕ ಕೆ.ಆರ್.ನಗರ, ಹೊಳೆನರಸೀಪುರ, ಬೇಲೂರು ರಸ್ತೆ ಮಾರ್ಗವನ್ನು ರಾಜ್ಯ ಹೆದ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸಲು ಟೆಂಡರ್ ಅಹ್ವಾನಿಸಲಾಗಿದೆ. ಇನ್ನು ಬಿಳಿಕೆರೆಯಿಂದ ಯಡಗೊಂಡನಹಳ್ಳಿ ಮತ್ತು ಬೇಲೂರಿನಿಂದ ಹಾಸನ ಮಾರ್ಗದ 90 ಕಿ.ಮಿ. ವಿಸ್ತರಣೆಗೆ ಅನುಮೋದನೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

Follow Us:
Download App:
  • android
  • ios