ತಲೆನೋವು ತಂದ ಬಡ್ತಿ ಮೀಸಲು, ಯಾರಿಗೆ ಲಾಭ? ಯಾರಿಗೆ ನಷ್ಟ?
ಬಡ್ತಿ ಮೀಸಲು ವಿಚಾರ ಸಿಎಂ ಕುಮಾರಸ್ವಾಮಿ ಅವರ ತಲೆನೋವಿಗೆ ಮತ್ತೆ ಕಾರಣವಾಗಿದೆ. ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬ ಗೊಂದಲ ಇರುವುದರಿಂದ ಸಿಎಂ ಸಭೆ ನಡೆಸಿದ್ದಾರೆ.
ಬೆಂಗಳೂರು[ನ.07] ಬಡ್ತಿ ಮೀಸಲಾತಿ ಜಾರಿ ಮಾಡುವ ಸಂಬಂಧ ತಿಕ್ಕಾಟ ಮುಂದುವರಿದಿದ್ದು ಅಧಿಕಾರಿಗಳು ಮತ್ತು ವಕೀಲರ ಜೊತೆಗೆ ಸಿಎಂ ಹೆಚ್ ಡಿಕೆ ಸಭೆ ನಡೆಸಿದ್ದಾರೆ.
ಬೆಂಗಳೂರಿನ ಖಾಸಗಿ ಹೊಟೆಲ್ ನಲ್ಲಿ ಮಹತ್ವದ ಸಮಾಲೋಚನೆ ನಡೆಸಿದ್ದು ವಕೀಲರು ಮತ್ತು ಅಧಿಕಾರಿಗಳಿಂದ ಕುಮಾರಸ್ವಾಮಿ ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಮಾಡಿದ್ದ ಬಡ್ತಿ ಮೀಸಲಾತಿ ವಿಧೇಯಕ ಜಾರಿ ವಿಚಾರದಲ್ಲಿ ಸಂಪುಟದಲ್ಲಿಯೇ ಪರ ವಿರೋಧದ ಅಭಿಪ್ರಾಯ ವ್ಯಕ್ತವಾಗಿದೆ. ಸ್ಪಷ್ಟವಾದ ತಿರ್ಮಾನ ತೆಗೆದುಕೊಳ್ಳುವಲ್ಲಿ ಹೆಣಗುತ್ತಿರುವ ಸಿಎಂ ಕಾನೂನಿನ ಸಾಧಕ - ಭಾದಕಗಳ ಕುರಿತು ಚರ್ಚೆ ನಡೆಸಿದ್ದಾರೆ.
ಏನಿದು ಬಡ್ತಿ ಮೀಸಲು? ಸಿದ್ಧವಾಗಿರುವ ಕಾನೂನು ಬಡ್ತಿಯಲ್ಲಿ ಎಸ್ ಸಿ ಎಸ್ ಟಿ ವರ್ಗದವರಿಗೆ ಶೇ. 18 ಮೀಸಲು ನೀಡಲು ಸಲಹೆ ನೀಡಿದೆ. ಕಾಯಿದೆ ಅನುಷ್ಠಾನಗೊಂಡರೆ ತಮ್ಮ ಭವಿಷ್ಯಕ್ಕೆ ಕುತ್ತು ಬರಲಿದೆ ಎಂಬ ಭೀತಿ ಸಾಮಾನ್ಯ ವರ್ಗದ್ದು. ರಾಜ್ಯದಲ್ಲಿ ಜ್ಯೂನಿಯರ್ ಕ್ಲಾಸ್-1 ಹಂತದ ವರೆಗೆ ಬಡ್ತಿಯಲ್ಲಿ ಶೇ.18ರಡಿ ಮೀಸಲು ಅಳವಡಿಸಿಕೊಳ್ಳಲಾಗಿದೆ. ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ಗಳು, ಸಚಿವಾಲಯದ ಅಧೀನ ಕಾರ್ಯದರ್ಶಿಗಳು ಹಾಗೂ ಡಿವೈಎಸ್ಪಿಗಳು ಈ ಕೇಡರ್ನಲ್ಲಿದ್ದಾರೆ.