5 ಕ್ಷೇತ್ರಗಳಲ್ಲೂ ಮೈತ್ರಿಕೂಟಕ್ಕೆ ಗೆಲುವು!
2 ವಿಧಾನಸಭಾ ಹಾಗೂ 3 ಲೋಕಸಭಾ ಕ್ಷೇತ್ರಗಳಿಗೆ ನ. 03ರಂದು ನಡೆಯಲಿರುವ ಉಪ-ಚುನಾವಣೆ | ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮತ್ತು ಬಿಜೆಪಿ ನಡುವೆ ನೇರಾ ಹಣಾಹಣಿ
ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ೫ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆಂದು ಡಿಸಿಎಂ ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಬ್ರದರ್ಸ್ ಗಣಿ ಸಂಪತ್ತು ಲೂಟಿ ಮಾಡಿದುದನ್ನ ಬಳ್ಳಾರಿ ಜನ ಯಾವತ್ತೂ ಮರೆಯೋದಿಲ್ಲ. ನನಗೆ ಬಂದಿರುವ ಮಾಹಿತಿಯ ಪ್ರಕಾರ, ಐದು ಕ್ಷೇತ್ರದಲ್ಲಿ ನಾವು ಗೆಲ್ತೀವಿ., ಎಂದು ಪರಂ ಹೇಳಿದ್ದಾರೆ.
ಇಂಟಲಿಜೆನ್ಸ್ ವರದಿ ಪ್ರಕಾರ ಕಾಂಗ್ರೆಸ್ ಸೋಲಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದ್ಯಾವ ಇಂಟಲಿಜೆನ್ಸ್ ಮಾಹಿತಿ ಕೊಟ್ಟಿದ್ದಾರೋ ಗೊತ್ತಿಲ್ಲ.. ಬಿಜೆಪಿ ಇಂಟಲಿಜೆನ್ಸ್ ನಮಗೆ ಸಿಗೋದಿಲ್ಲ, ನಮಗೆ ಇರೋ ಮಾಹಿತಿಯನ್ನು ನಿಮ್ಮ ಮುಂದೆ ಇಟ್ಟಿದ್ದೇನೆ, ಐದು ಕ್ಷೇತ್ರದಲ್ಲಿ ನಾವು ಗೆಲ್ತೀವಿ, ಎಂದು ಅವರು ಹೇಳಿದ್ದಾರೆ.
ಮನುಷ್ಯ ಕನಸು ಕಾಣೋದಕ್ಕೆ ಲಿಮಿಟ್ ಇರೋಲ್ಲ, ಹಾಗೇನೆ ಯಡಿಯೂರಪ್ಪ ಕನಸು ಕಾಣುತ್ತಿದ್ದಾರೆ ಅಷ್ಟೇ ; ಸಂಪುಟ ವಿಸ್ತರಣೆ ಮಾಡ್ತೀವಿ, ಚುನಾವಣೆಯ ನಂತರ ಎಲ್ಲಾ ಪ್ರಕ್ರಿಯೆ ಆರಂಭವಾಗಲಿದೆ, ಎಂದು ಪರಮೇಶ್ವರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
ನವಂಬರ್ 03 (ಶನಿವಾರ) ರಂದು ರಾಜ್ಯದ 2 ವಿಧಾನಸಭಾ ಹಾಗೂ 3 ಲೋಕಸಭಾ ಕ್ಷೇತ್ರಗಳಿಗೆ ಉಪ-ಚುನಾವಣೆ ನಡೆಯಲಿದ್ದು, ನ.06ರಂದು (ಮಂಗಳವಾರ) ಫಲಿತಾಂಶಗಳು ಪ್ರಕಟವಾಗಲಿವೆ.
ರಾಮನಗರ ಮತ್ತು ಜಮಖಂಡಿ ವಿಧಾನಸಭೆಗಳಿಗೆ, ಹಾಗೂ ಮಂಡ್ಯ, ಶಿವಮೊಗ್ಗ ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ.