ರಾಜ್ಯಪಾಲರ ಕೈ ಕಟ್ಟಿಹಾಕಲು ಇದೆ ಮೈತ್ರಿ ಪಾಳಯಕ್ಕೆ ಅವಕಾಶ?
ಕರ್ನಾಟಕ ರಾಜಕೀಯ ಪ್ರಹಸನ ಮುಂದುವರಿದಿದ್ದು, ಈ ವೇಳೆ ರಾಜ್ಯ ಪಾಲರು ಮುಂದೇನು ಮಾಡಬಹುದು. ಇಲ್ಲಿದೆ ಮಾಹಿತಿ.
ಬೆಂಗಳೂರು [ಜು.19] : ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತ ಯಾಚನೆ ನಿರ್ಣಯ ಚರ್ಚೆ ವೇಳೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕ್ರಿಯಾಲೋಪ ಮಂಡಿಸಿ ಇಡೀ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಮೈತ್ರಿಕೂಟದ ತಂತ್ರಕ್ಕೆ ರಾಜ್ಯಪಾಲರು ಬ್ರೇಕ್ ಹಾಕಿದ್ದಾರೆ. ವಿಶ್ವಾಸಮತಕ್ಕೆ ಶುಕ್ರವಾರ ಮಧ್ಯಾಹ್ನ 1.30ರ ಗಡುವು ವಿಧಿಸಿದ್ದಾರೆ. ಇನ್ನು ಈ ವೇಳೆ ರಾಜ್ಯ ಪಾಳರು ಮುಂದೇನು ಮಾಡಬಹುದು.
- ವಿಶ್ವಾಸಮತ ಯಾಚನೆಗೆ ನೀಡಿರುವ ಗಡುವು ಕುರಿತು ಮೈತ್ರಿಕೂಟ ನ್ಯಾಯಾಲಯದಿಂದ ತಡೆಯಾಜ್ಞೆ ತಂದರೆ ರಾಜ್ಯಪಾಲರ ಕೈ ಕಟ್ಟಿಹಾಕಿದಂತಾಗುತ್ತದೆ.
- ಈ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದೇವೆ, ಹಾಗಾಗಿ ತೀರ್ಪು ಬರುವವರೆಗೂ ನೀವು ನೀಡಿರುವ ಗಡುವನ್ನು ಹಿಂಪಡೆಯಿರಿ ಎಂದು ಮೈತ್ರಿಕೂಟ ಮನವಿ ಮಾಡಿದರೆ, ಅದನ್ನು ತಿರಸ್ಕರಿಸಬಹುದು.
- ನೀಡಿರುವ ಗಡುವಿನೊಳಗೆ ಮುಖ್ಯಮಂತ್ರಿಯವರು ವಿಶ್ವಾಸಮತ ಯಾಚನೆ ಮಾಡದಿದ್ದರೆ ಆಗ ಈ ಬಗ್ಗೆ ಕೇಂದ್ರಕ್ಕೆ ವರದಿ ಕಳುಹಿಸಬಹುದು.
- ತನ್ಮೂಲಕ ಸರ್ಕಾರವನ್ನು ವಜಾಗೊಳಿಸಿ, ವಿಧಾನಸಭೆಯನ್ನು ಅಮಾನತಿನಲ್ಲಿಡಬಹುದು.
- ವಿಧಾನಸಭೆಯನ್ನು ಅಮಾನತಿನಲ್ಲಿಟ್ಟನಂತರ ತಮಗೆ ಬಹುಮತವಿದೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕರು ಮನವಿ ಮಾಡಿದರೆ ಅವರಿಗೆ ಸರ್ಕಾರ ರಚಿಸಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡಬಹುದು.