ನಾಲ್ವರು ಬಿಜೆಪಿ ಶಾಸಕರ ಮೇಲೆ ಹದ್ದಿನ ಕಣ್ಣು : ಬೆಂಗಳೂರಿಗೆ ಬರಲು ಬುಲಾವ್
ರಾಜ್ಯ ರಾಜಕೀಯದಲ್ಲಿ ಹೈ ಡ್ರಾಮಾ ನಡೆಯುತ್ತಿದೆ. ಎಲ್ಲಾ ಸಚಿವರು ರಾಜೀನಾಮೆ ನೀಡಿದ್ದು, ಇದೇ ವೇಳೆ ಬಿಜೆಪಿ ಅನುಮಾನಾಸ್ಪದ ಶಾಸಕರ ಮೇಲೆ ಹದ್ದಿನ ಕಣ್ಣಿರಿಸಿದೆ.
ಬೆಂಗಳೂರು [ಜು.08] : ರಾಜ್ಯ ರಾಜಕೀಯದಲ್ಲಿ ರಾಜೀನಾಮೆ ಪ್ರಹಸನ ಜೋರಾಗಿದ್ದು, ಮೈತ್ರಿ ಸರ್ಕಾರದ ಎಲ್ಲಾ ಸಚಿವರೂ ರಾಜೀನಾಮೆ ನೀಡಿದ್ದಾರೆ. ಇದೇ ಬೆನ್ನಲ್ಲೇ ಅನುಮಾನವಿರುವ ಬಿಜೆಪಿ ಶಾಸಕರ ಮೇಲೆ ಮುಖಂಡರು ಹದ್ದಿನ ಕಣ್ಣು ಇರಿಸಿದ್ದಾರೆ.
ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ನಾಯಕರು ಮುಂದಾಗಿದ್ದು, ಕೆಲ ಶಾಸಕರಿಗೆ ಬೆಂಗಳೂರಿಗೆ ಆಗಮಸುವಂತೆ ಬುಲಾವ್ ನೀಡಲಾಗಿದೆ.
ಲಗೇಜ್ ಸಮೇತವಾಗಿ ಬೆಂಗಳೂರಿಗೆ ಬರುವಂತೆ ತುಮಕೂರು ಜಿಲ್ಲೆಯ ನಾಲ್ವರು ಬಿಜೆಪಿ ಶಾಸಕರಿಗೆ ಸೂಚನೆ ನೀಡಲಾಗಿದೆ.
ತುಮಕೂರು ಶಾಸಕರಾದ ಜ್ಯೋತಿಗಣೇಶ್, ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಬೆಂಗಳೂರಿಗೆ ಪಯಣ ಬೆಳೆಸಿದ್ದು, ತಿಪಟೂರು ಶಾಸಕ ಬಿ.ಸಿ.ನಾಗೇಶ್ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಇನ್ನು ಇನ್ನೋರ್ವ ತುರುವೆಕೆರೆ ಶಾಸಕ ಮಸಾಲೆ ಜಯರಾಮ್ ಮೇಲೆಯೂ ಕೂಡ ಬಿಜೆಪಿ ನಾಯಕರು ಕಣ್ಣಿಟ್ಟು ಬೆಂಗಳೂರಿಗೆ ಆಗಮಿಸಲು ಬುಲಾವ್ ನೀಡಿದ್ದಾರೆ.