'ಸಚಿವ ಜಿಟಿಡಿ ಕೂಡ ರಾಜೀನಾಮೆ ಕೊಡ್ತಾರೆ!'
ಅಳಿಯನ ವರ್ಗ ಮಾಡಿಸಲೂ ನನ್ನಿಂದ ಆಗಲಿಲ್ಲ| ಸಾರಾ ಮಹೇಶ್ ನನ್ನ ಅಳಿಯನಿಗೆ ಕುಡುಕನ ಪಟ್ಟ ಕಟ್ಟಿದರು| ಸಚಿವ ಜಿಟಿಡಿ ಕೂಡ ರಾಜೀನಾಮೆ ಕೊಡ್ತಾರೆ: ವಿಶ್ವನಾಥ್
ಬೆಂಗಳೂಋಉ[ಜು.08]: ನನಗೆ ರಾಜಕೀಯ ಪುನರ್ ಜನ್ಮ ನೀಡಿದ್ದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಲ್ಲ, ಬದಲಿಗೆ ನನ್ನ ಕ್ಷೇತ್ರದ ಜನ ಎಂದು ಶಾಸಕ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.
ಶಾಸಕ ಸ್ಥಾನ ರಾಜೀನಾಮೆ ಸಲ್ಲಿಸಿ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಅವರು ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ರಾಜಕೀಯ ಪುನರ್ ಜನ್ಮ ನೀಡಿದ್ದಾರೆ ಎಂದು ಹೇಳುವ ಮೂಲಕ ಈ ಹಿಂದೆ ಹೇಳಿಕೆಯನ್ನು ಉಲ್ಟಾ ಹೊಡೆದರು
ನಾನು ಹೆಸರಿಗೆ ಮಾತ್ರ ಜೆಡಿಎಸ್ ಅಧ್ಯಕ್ಷ ಆಗಿದ್ದೆ. ನನ್ನ ಅಳಿಯನ ವರ್ಗಾವಣೆ ಮಾಡಿಸಲು ನನಗೆ ಆಗಲಿಲ್ಲ. ನನ್ನ ಅಳಿಯನಿಗೆ ಕುಡುಕನ ಪಟ್ಟ ಕಟ್ಟುವ ಕೆಲಸವನ್ನು ಸಚಿವ ಸಾ.ರಾ.ಮಹೇಶ್ ಮಾಡಿದರು. ರಾಜ್ಯದಲ್ಲಿ ಜೆಡಿಎಸ್ ವಾಷ್ಔಟ್ ಆಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಮ್ಮ ಮಾತಿಗೆ ಮನ್ನಣೆ ಕೊಡುವ ಕೆಲಸ ಮಾಡಲಿಲ್ಲ. ಜೆಡಿಎಸ್ ಮುಖಂಡರ ನಡವಳಿಕೆ ಬಹುತೇಕ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಚಿವ ಜಿ.ಟಿ.ದೇವೇಗೌಡ ಅವರು ಸಹ ರಾಜೀನಾಮೆ ನೀಡಲಿದ್ದಾರೆ ಕಾದು ನೋಡಿ ಎಂದು ಹೇಳಿದರು.
ಸಚಿವ ಸಾ.ರಾ.ಮಹೇಶ್ ನಡವಳಿಕೆ ಸರಿಯಿಲ್ಲ. ಇದರಿಂದ ಜಿ.ಟಿ.ದೇವೇಗೌಡ ಬೇಸತ್ತಿದ್ದಾರೆ. ಅವರು ಎಲ್ಲಾ ಪಕ್ಷದಲ್ಲಿ ಇದ್ದು ಬಂದಿರುವುದರಿಂದ ರಾಜೀನಾಮೆ ನೀಡುವ ಸಾಧ್ಯತೆ ಇದೆ. ದುರಹಂಕಾರಿ ಸಿದ್ದರಾಮಯ್ಯ ಎಲ್ಲದಕ್ಕೂ ನಾನೇ ಎನ್ನುವ ಮನಸ್ಥಿತಿ ಬೆಳೆಸಿಕೊಂಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಸಿಗಲಿಲ್ಲ. ಅಲ್ಲದೇ, ಪಕ್ಷದಲ್ಲಿ ಸಿಗಬೇಕಾದ ಗೌರವ ಸಿಗಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.