Asianet Suvarna News Asianet Suvarna News

ಬಂಡೀಪುರದಲ್ಲಿ ಹೊಸ ಸ್ವರೂಪದ ಯೋಜನೆ

 ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸುವ ಪ್ರಸ್ತಾವನೆ ಬಂದಿತ್ತು. ಪರಿಸರದ ದೃಷ್ಟಿಯಿಂದ ಅದು ಪ್ರಯೋಜನವಲ್ಲದ ಕಾರಣ ತಿರಸ್ಕರಿಸಲಾಗಿದೆ ಎಂದು ಅರಣ್ಯ ಸಚಿವ ಶಂಕರ್ ಹೇಳಿದ್ದಾರೆ. 

Karnataka Govt Rejected Centre Proposal For Elevated Corridor In Bandipur
Author
Bengaluru, First Published Aug 11, 2018, 7:40 AM IST

ಬೆಂಗಳೂರು :  ಬಂಡೀಪುರ ಅರಣ್ಯದಲ್ಲಿ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸುವ ಕೇಂದ್ರದ ಪ್ರಸ್ತಾವನೆ ತಿರಸ್ಕರಿಸಿರುವುದಾಗಿ ಅರಣ್ಯ ಸಚಿವ ಆರ್‌.ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ಅರಣ್ಯ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಡೀಪುರ ಹುಲಿ ಸಂರಕ್ಷಣಾ ಪ್ರದೇಶದಲ್ಲಿ ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸುವ ಪ್ರಸ್ತಾವನೆ ಬಂದಿತ್ತು. ಪರಿಸರದ ದೃಷ್ಟಿಯಿಂದ ಅದು ಪ್ರಯೋಜನವಲ್ಲದ ಕಾರಣ ತಿರಸ್ಕರಿಸಲಾಗಿದೆ ಎಂದರು.

ಪರಿಸರಕ್ಕೆ ಹಾನಿಯುಂಟುಮಾಡುವ ಯಾವುದೇ ಯೋಜನೆ ಒಪ್ಪಲು ಸಾಧ್ಯವಿಲ್ಲ, ಪರಿಸರವಾದಿಗಳು, ಅಧಿಕಾರಿಗಳು ಸಹ ಯೋಜನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತಾಗಿ ವಿವರಿಸಿರುವ ಹಿನ್ನೆಲೆಯಲ್ಲಿ ಯೋಜನೆಯನ್ನು ಕೈ ಬಿಡಲಾಗಿದೆ.ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಒತ್ತಡಕ್ಕೆ ಮಣಿಯುವ ಪ್ರಶ್ನೆಯಿಲ್ಲ ಎಂದರು.

ಹಸಿರು ಕರ್ನಾಟಕ:  ರಾಜ್ಯದಲ್ಲಿ ಅರಣ್ಯ ಪ್ರದೇಶ ವಿಸ್ತರಿಸಲು 5.50 ಕೋಟಿ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದ್ದು, ಯೋಜನೆಗೆ ಅಭಿಯಾನದ ಸ್ವರೂಪ ನೀಡಲು ಆ.15 ರಿಂದ ಮೂರು ದಿನಗಳ ಕಾಲ ‘ಹಸಿರು ಕರ್ನಾಟಕ’ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಸಚಿವರು ಹೇಳಿದರು.

ರಾಜ್ಯದಲ್ಲಿ ಪ್ರಸ್ತುತ ಶೇ.22 ಹಸಿರು ಪ್ರಮಾಣವಿದ್ದು,ಅದನ್ನು ಶೇ. 33ಕ್ಕೆ ಹೆಚ್ಚಿಸಬೇಕಿದೆ. ಅದಕ್ಕಾಗಿ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡು ಅಭಿಯಾನದ ರೂಪದಲ್ಲಿ ಸಸಿ ನೆಡುವ ಕಾರ್ಯಕ್ರ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಪುನತಿ ಶ್ರೀಧರ್‌ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ನೆಡಲಾಗಿದ್ದ ಶೇ. 70 ಸಸಿಗಳು ಬೆಳೆಯುತ್ತಿವೆ. ಶೇ. 30 ಮಾತ್ರವೇ ವಿಫಲವಾಗಿರಬಹುದು. ರಾಷ್ಟ್ರೀಯ ವರದಿಯಲ್ಲಿಯೂ 1100 ಚದರ ಕಿಲೋ ಮೀಟರ್‌ ಹಸಿರು ಪ್ರಮಾಣ ಹೆಚ್ಚಳಗೊಂಡಿರುವುದು ದಾಖಲಾಗಿದೆ. ಹೀಗಾಗಿ ಅರಣ್ಯ ಇಲಾಖೆ ನಡೆಸುತ್ತಿರುವ ವನಮಹೋತ್ಸವಗಳು ಯಶಸ್ವಿಯಾಗಿವೆ ಎಂದು ಮಾಹಿತಿ ನೀಡಿದರು.

ಅಲ್ಪಪ್ರಮಾಣದಲ್ಲಿ ಅಕೇಷಿಯಾ ಅಗತ್ಯ:

ನೀಲಗಿರಿ, ಅಕೇಷಿಯಾ ಮರ ಬೆಳೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಆದರೆ ಈಗಾಗಲೇ ಬೆಳೆದಿರುವ ಮರಗಳನ್ನು ತೆಗೆದು ಹಾಕಬೇಕೆಂಬ ವಾದವೂ ಅವೈಜ್ಞಾನಿಕವಾಗಿದೆ. ಕೆಲವು ಪ್ರಬೇಧÜದ ಅಕೇಷಿಯಾ ಕತ್ತರಿಸಿದರೂ ಮತ್ತೆ ಬೆಳೆಯುತ್ತವೆ. ಅವುಗಳನ್ನು ತೆಗೆಯುವುದು ಪರಿಹಾರವಲ್ಲ. ಪಶ್ಚಿಮಘಟ್ಟದ ಕೆಲ ಪ್ರದೇಶದಲ್ಲಿ ಅಕೇಷಿಯಾ ಬೆಳೆದಿದ್ದರಿಂದ ಅಲ್ಲಿನ ಮಣ್ಣಿನ ಗುಣಮಟ್ಟಹೆಚ್ಚಿದೆ. ಹಾಗಂತ ಹೆಚ್ಚು ಅಕೇಷಿಯಾ ಬೆಳೆಯುವುದು ತಪ್ಪಾಗುತ್ತದೆ. ಅರಣ್ಯದಲ್ಲಿ ತೇಗದ ಮರಗಳು ಬೆಳೆದರೂ ಬೇರೆ ಮರಗಳು ಬೆಳೆಯುವುದಿಲ್ಲ ಎಂಬ ಮಾತಿದೆ. ಆದರೆ ಆನೆಗೆ ತೇಗದ ಮರ, ಸಾಗವಾನಿ ಉತ್ತಮ ಆಹಾರವಾಗಿದೆ. ಅವುಗಳಿಂದಲೇ ಪೌಷ್ಟಿಕಾಂಶ ದೊರೆಯುವುದರಿಂದ ಎಲ್ಲ ಪ್ರಭೇದವೂ ಅಗತ್ಯವಾಗಿರುತ್ತದೆ. ಅವುಗಳನ್ನು ನಿಯಮಿತವಾಗಿ ಬೆಳೆಸಬೇಕಷ್ಟೇ ಅಂತದಕ್ಕೆ ಅರಣ್ಯ ಇಲಾಖೆ ಆದ್ಯತೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios