ಲೋಕಸಭಾ ಎಲೆಕ್ಷನ್ ಮುಗಿತು, ಹೆಚ್ಚುವರಿ ಬಸ್ ದರ ಕೊಡೋಕೆ ರೆಡಿಯಾಗಿ..!
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಡೆ ಹಿಡಿಯಲಾಗಿದ್ದ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಮರು ಜೀವ|ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಸಲು ಮತ್ತೆ ಪ್ರಸ್ತಾವನೆ| ಮೇ. 25ರ ನಂತರ ದರ ಏರಿಸುವ ನಿರ್ಧಾರ ಪ್ರಕಟಿಸುವ ಕುರಿತು ಸಿಎಂ ಮೌಖಿಕ ಸಮ್ಮತಿ|ಚುನಾವಣೆ ಫಲಿತಾಂಶದ ನಂತರ ಅಧಿಕೃತ ಆದೇಶ ಹೊರ ಬೀಳುವ ನಿರೀಕ್ಷೆ| ಎರಿಕೆಯಾದ್ರೆ ಎಷ್ಟು ಪರ್ಸೆಂಟ್ ಆಗಬಹುದು..?
ಬೆಂಗಳೂರು, [ಮೇ.21]: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂಲೆ ಸೇರಿದ್ದ ಕೆಎಸ್ಆರ್ಟಿಸಿ ಸೇರಿದಂತೆ ಎಲ್ಲ ನಿಗಮಗಳ ಬಸ್ ಪ್ರಯಾಣ ದರ ಹೆಚ್ಚಳ ಪ್ರಸ್ತಾವನೆ ಫೈಲ್ ಸಿಎಂ ಟೇಬಲ್ ಗೆ ಬಂದಿದೆ.
ಕೆಎಸ್ಆರ್ಟಿಸಿ ಸೇರಿದಂತೆ ಎಲ್ಲಾ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಹೆಚ್ಚಿಸಲು ಸಾರಿಗೆ ಸಚಿವ ಸಚಿವ ಡಿ.ಸಿ. ತಮ್ಮಣ್ಣ ಅವರು ಮತ್ತೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಈ ಬಗ್ಗೆ ಮೇ. 9ರಂದು ಸಾರಿಗೆ ಸಚಿವರು ಸಿಎಂ ಭೇಟಿ ಮಾಡಿ ಸಾರಿಗೆ ಸಂಸ್ಥೆಗಳ ಪ್ರಯಾಣ ದರವನ್ನು ಶೇ. 18ರಷ್ಟು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಡೀಸೆಲ್ ದರ ಏರಿಳಿತದಿಂದಾಗಿ ಸಾರಿಗೆ ಸಂಸ್ಥೆಗೆ ಈವರೆಗೆ 100 ಕೋಟಿ ರೂ.ನಷ್ಟವಾಗಿದೆ. ಬಸ್ ಪ್ರಯಾಣ ದರ ಏರಿಸದಿದ್ದರೆ ಸಾರಿಗೆ ಸಂಸ್ಥೆಗಳು ನಷ್ಟಕ್ಕೆ ಸಿಲುಕಲಿವೆ. ಹೀಗಾಗಿ ಆದಷ್ಟು ಬೇಗ ಬಸ್ ಪ್ರಯಾಣ ದರ ಹೆಚ್ಚಿಸಲೇಬೇಕೆಂದು ಸಿಎಂ ಕುಮಾರಸ್ವಾಮಿ ಮೇಲೆ ಸಚಿವ ಡಿ.ಸಿ. ತಮ್ಮಣ್ಣ ಒತ್ತಡ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶೇ.18ರ ಬದಲು ಶೇ. 15ರಷ್ಟು ಹೆಚ್ಚಿಸುವ ಕುರಿತು ಸಿಎಂ ತಾತ್ವಿಕ ಸಮ್ಮತಿಸಿದ್ದು, ಮೇ. 25ರ ನಂತರ ದರ ಏರಿಸುವ ನಿರ್ಧಾರವನ್ನು ಪ್ರಕಟಿಸುವ ಸಾಧ್ಯತೆಗಳಿದ್ದು, ಚುನಾವಣೆ ಫಲಿತಾಂಶದ ನಂತರ ಅಂದ್ರೆ ಜೂನ್ 1ರಿಂದ ಬಸ್ ಪ್ರಯಾಣ ದರ ಹೆಚ್ಚಳ ಜಾರಿಗೆ ಬರುವುದು ಬಹುತೇಕ ಖಚಿತ ಎಂದು ಸುವರ್ಣ ನ್ಯೂಸ್ ಗೆ ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ.
ಈ ಹಿಂದೆ ಸಾರಿಗೆ ಇಲಾಖೆ ಪ್ರಯಾಣ ದರ ಏರಿಕೆ ಕುರಿತು ಪ್ರಸ್ತಾವಣೆ ಸಲ್ಲಿಸಿತ್ತು. ಆದ್ರೆ, ಚುನಾವಣೆಗಳ ಕಾರಣ ನೀಡಿ ಮೂರು ಬಾರಿ ಸಿಎಂ ದರ ಏರಿಕೆ ಪ್ರಸ್ತಾವನೆ ತಿರಸ್ಕರಿಸಿದ್ದರು.