ಕನ್ನಡದಲ್ಲಿ ಕರಡು ವಿಧೇಯಕ ಮಂಡನೆ ಕಡ್ಡಾಯ: ಸಿಎಸ್‌ | ಪ್ರಸ್ತುತ ಸಚಿವ ಸಂಪುಟದ ಟಿಪ್ಪಣಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಂಡಿಸಲಾಗುತ್ತಿದೆ |  

 ಬೆಂಗಳೂರು (ಜು. 18): ಸಚಿವ ಸಂಪುಟದ ಅನುಮೋದನೆ ಕೋರಿ ಮಂಡಿಸಲಾಗುವ ಕರಡು ವಿಧೇಯಕಗಳು, ನಿಯಮಗಳು ಇನ್ನು ಮುಂದೆ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಇರಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್‌ಭಾಸ್ಕರ್‌ ಸುತ್ತೋಲೆ ಹೊರಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಪ್ರಸ್ತುತ ಸಚಿವ ಸಂಪುಟದ ಟಿಪ್ಪಣಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಂಡಿಸಲಾಗುತ್ತಿದೆ. ಆದರೆ ಸಚಿವ ಸಂಪುಟದ ಅನುಮೋದನೆ ಕೋರಿ ವಿವಿಧ ಇಲಾಖೆಗಳಿಂದ ಮಂಡಿಸುತ್ತಿರುವ ಕರಡು ವಿಧೇಯಗಳು ಅಥವಾ ನಿಯಮಗಳಲ್ಲಿ ಹಲವು ಆಂಗ್ಲ ಭಾಷೆಯಲ್ಲಿ ಇರುತ್ತವೆ.

ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಕ್ಷೇಪಣೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಚಿವ ಸಂಪುಟ ಅನುಮೋದನೆ ಕೋರಿ ಮಂಡಿಸಲಾಗುವ ಕರಡು ವಿಧೇಯಕಗಳು ಮತ್ತು ನಿಯಮಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಇರಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.

ಪ್ರಾಧಿಕಾರ ಸ್ವಾಗತ:

ಸುತ್ತೋಲೆ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಅವರನ್ನು ಅಭಿನಂದಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಪ್ರಾಧಿಕಾರದ ಆಶಯಕ್ಕೆ ಅನುಗುಣವಾಗಿ ಸರ್ಕಾರ ತೆಗೆದುಕೊಂಡ ಅರ್ಥಪೂರ್ಣ ನಿರ್ಣಯ ಇದಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಕನ್ನಡ ಪರವಾದ ವಾತಾವರಣ ನಿರ್ಮಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.