ಕನ್ನಡದಲ್ಲಿ ಕರಡು ವಿಧೇಯಕ ಮಂಡನೆ ಕಡ್ಡಾಯ
ಕನ್ನಡದಲ್ಲಿ ಕರಡು ವಿಧೇಯಕ ಮಂಡನೆ ಕಡ್ಡಾಯ: ಸಿಎಸ್ | ಪ್ರಸ್ತುತ ಸಚಿವ ಸಂಪುಟದ ಟಿಪ್ಪಣಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಂಡಿಸಲಾಗುತ್ತಿದೆ |
ಬೆಂಗಳೂರು (ಜು. 18): ಸಚಿವ ಸಂಪುಟದ ಅನುಮೋದನೆ ಕೋರಿ ಮಂಡಿಸಲಾಗುವ ಕರಡು ವಿಧೇಯಕಗಳು, ನಿಯಮಗಳು ಇನ್ನು ಮುಂದೆ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಇರಬೇಕು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.
ಪ್ರಸ್ತುತ ಸಚಿವ ಸಂಪುಟದ ಟಿಪ್ಪಣಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಮಂಡಿಸಲಾಗುತ್ತಿದೆ. ಆದರೆ ಸಚಿವ ಸಂಪುಟದ ಅನುಮೋದನೆ ಕೋರಿ ವಿವಿಧ ಇಲಾಖೆಗಳಿಂದ ಮಂಡಿಸುತ್ತಿರುವ ಕರಡು ವಿಧೇಯಗಳು ಅಥವಾ ನಿಯಮಗಳಲ್ಲಿ ಹಲವು ಆಂಗ್ಲ ಭಾಷೆಯಲ್ಲಿ ಇರುತ್ತವೆ.
ಈ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಕ್ಷೇಪಣೆ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಸಚಿವ ಸಂಪುಟ ಅನುಮೋದನೆ ಕೋರಿ ಮಂಡಿಸಲಾಗುವ ಕರಡು ವಿಧೇಯಕಗಳು ಮತ್ತು ನಿಯಮಗಳು ಕಡ್ಡಾಯವಾಗಿ ಕನ್ನಡ ಭಾಷೆಯಲ್ಲಿ ಇರಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚಿಸಿದ್ದಾರೆ.
ಪ್ರಾಧಿಕಾರ ಸ್ವಾಗತ:
ಸುತ್ತೋಲೆ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರನ್ನು ಅಭಿನಂದಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಪ್ರಾಧಿಕಾರದ ಆಶಯಕ್ಕೆ ಅನುಗುಣವಾಗಿ ಸರ್ಕಾರ ತೆಗೆದುಕೊಂಡ ಅರ್ಥಪೂರ್ಣ ನಿರ್ಣಯ ಇದಾಗಿದೆ. ಆಡಳಿತ ವ್ಯವಸ್ಥೆಯಲ್ಲಿ ಕನ್ನಡ ಪರವಾದ ವಾತಾವರಣ ನಿರ್ಮಿಸಲು ಇದು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.