ಭೋಜನಕ್ಕೆ ತೆರಳಿದ ಸಿಎಂ ಕಲಾಪಕ್ಕೆ ಬಂದಿಲ್ಲ.. ಕಚೇರಿಯಲ್ಲೇ ಕುಳಿತು ಅಂತಿಮ ತೀರ್ಮಾನ?
ಸೋಮವಾರದ ಕಲಾಪದ ಭೋಜನ ವಿರಾಮದ ವೇಳೆ ಭೋಜನಕ್ಕೆ ತೆರಳಿದ್ದ ಸಿಎಂ ಕುಮಾರಸ್ವಾಮಿ ಮಧ್ಯಾಹ್ನದ ಮೇಲಿನ ಕಲಾಪಕ್ಕೆ ಬಂದೇ ಇಲ್ಲ. ಇದು ಸಹಜವಾಗಿಯೇ ಹಲವಾರು ಪ್ರಶ್ನೆಗಳನ್ನು ಎತ್ತಿದೆ.
ಬೆಂಗಳೂರು[ಜು. 22] ಸಿಎಂ ಕುಮಾರಸ್ವಾಮಿ ಮಧ್ಯಾಹ್ನದ ಭೋಜನಕ್ಕೆ ತೆರಳಿದ ಸಿಎಂ ವಿಧಾನಸೌಧದ ತಮ್ಮ ಕಚೇರಿಯಲ್ಲೇ ಇದ್ದಾರೆ. ಕಲಾಪದಲ್ಲಿ ಚರ್ಚೆ ನಡೆಯುತ್ತಿದ್ದರೂ ಹಾಜರಾಗಿಲ್ಲ. ರಮೇಶ್ ಕುಮಾರ್ ಇಂದೇ ವಿಶ್ವಾಸಮತ ಎನ್ನುವ ಮಾತುಗಳನ್ನು ಹೇಳಿದ್ದಾರೆ.
ತಮ್ಮ ಕಚೇರಿಯಲ್ಲೇ ಕುಳಿತುಕೊಂಡಿರುವ ಕುಮಾರಸ್ವಾಮಿ ಸಂಜೆ 7 ಗಂಟೆಗೆ ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಯಾವ ಸಿಎಂ ಸಹ ಕೊನೆಯ ಸಂದರ್ಭದಲ್ಲಿ ಭಾಷಣ ಮಾಡಲು ಸಿಗುವ ಅವಕಾವನ್ನು ಕಳೆದುಕೊಳ್ಳುವುದಿಲ್ಲ. ಅದೊಂದು ಐತಿಹಾಸಿಕ ದಾಖಲೆಯಾಗಿ ಉಳಿದುಕೊಳ್ಳುತ್ತದೆ.
ಸಿಎಂ ಕುಮಾರಸ್ವಾಮಿ ವಿಧಾನಸೌಧದ ಕಲಾಪಕ್ಕೆ ಆಗಮಿಸಿ ವಿದಾಯದ ಭಾಷಣ ಮಾಡಿ ಅಲ್ಲಿಂದ ರಾಜ್ಯಪಾಲರ ಬಳಿಗೆ ತೆರಳಿ ರಾಜೀನಾಮೆ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಒಂದು ಅಥವಾ ಎರಡು ಮತಗಳ ಅಂತರದಲ್ಲಿ ಸೋಲು ಅಥವಾ ಗೆಲುವು ಕಾಣುವ ಸಾಧ್ಯತೆ ಇದ್ದರೆ ವಿಶ್ವಾಸಮತ ಯಾಚನೆಗೆ ಕೈಹಾಕುತ್ತಾರೆ ಎನ್ನಬಹುದಾಗಿತ್ತು. ಆದರೆ 20 ಜನ ಶಾಸಕರು ಈಗಾಗಲೇ ಗೈರಾಗಿದ್ದಾರೆ. ಇನ್ನೊಂದು ಕಡೆ ಬಿಎಸ್ ಪಿ ಶಾಸಕ ಮಹೇಶ್ ಸಹ ಪತ್ತೆ ಇಲ್ಲ. ಈ ಎಲ್ಲ ಕಾರಣಗಳು ಸಿಎಂ ಕುಮಾರಸ್ವಾಮಿ ಅವರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.