ಕೈಗೆ ಬೈ ಹೇಳಿದ ಇಬ್ಬರು ಶಾಸಕರು
ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷ ಬಿಡುವ ಪರ್ವ ಮುಂದುವರಿದಿದೆ. ಕಾಂಗ್ರೆಸ್ ತೊರೆದ ಇಬ್ಬರು ಶಾಸಕರಲ್ಲಿ ಒಬ್ಬರು ಬಿಜೆಪಿ ಸೇರ್ಪಡೆಯಾಗುತ್ತಿದ್ದರೆ, ಮತ್ತೊಬ್ಬರು ತೆಲೆ ಹೊರಲು ಸಿದ್ಧರಾಗುತ್ತಿದ್ದಾರೆ.
ರಾಣೆಬೆನ್ನೂರು: ಪಕ್ಷದ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ವೈ. ಗೋಪಾಲಕೃಷ್ಣ ಹಾಗೂ ತರೀಕೆರೆ ಕ್ಷೇತ್ರದ ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುವಾರ ನಗರದಲ್ಲಿ ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ರಾಜೀನಾಮೆ ಸಲ್ಲಿಸಿದರು. ವಿಧಾನಸಭಾಧ್ಯಕ್ಷರು ರಾಜೀನಾಮೆ ಪತ್ರ ಅಂಗೀಕರಿಸಿದರು. ಗೋಪಾಲಕೃಷ್ಣ ಅವರು ಸದ್ಯದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದು, ಕೂಡ್ಲಿಗಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಇನ್ನು ಶ್ರೀನಿವಾಸ್ ಅವರು ಏ.24ರಂದು ಜೆಡಿಎಸ್ ಅಭ್ಯರ್ಥಿಯಾಗಿ ತರೀಕೆರೆಯಿಂದ ನಾಮಪತ್ರ ಸಲ್ಲಿಸಲಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎನ್.ವೈ.ಗೋಪಾಲಕೃಷ್ಣ, ತಾವು ಕಾಂಗ್ರೆಸ್ ಏಳ್ಗೆಗಾಗಿ ಹಲವು ವರ್ಷಗಳಿಂದ ದುಡಿದಿದ್ದೇನೆ. ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿವರೆಗೆ ಕೈಗೊಂಡ ಪಾದಯಾತ್ರೆಯಲ್ಲಿ ತಮ್ಮದೂ ಬಹುಮುಖ್ಯ ಪಾತ್ರವಿದೆ. ಕಾಂಗ್ರೆಸ್ನಿಂದ ಮೊಳಕಾಲ್ಮುರು ಕ್ಷೇತ್ರದಿಂದ ಮೂರು ಬಾರಿ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಒಂದು ಬಾರಿ ಸೇರಿದಂತೆ 4 ಸಲ ಶಾಸಕನಾಗಿದ್ದೇನೆ. ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಅದಲ್ಲದೆ ಈ ಬಾರಿ ಪಕ್ಷ ಟಿಕೆಟ್ ನೀಡದೆ ಕಡೆಗಣಿಸಿದ್ದರಿಂದ ಬೇಸತ್ತು ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು.