ರಾಜ್ಯ ವಿಧಾನಸಭಾ ಚುನಾವಣೆಗೆ ಸಲ್ಲಿಸಿರುವ ನಾಮಪತ್ರಗಳನ್ನು ಹಿಂಪಡೆಯಲು ಶುಕ್ರವಾರ ಅಂತಿಮ ದಿನವಾಗಿದ್ದು, ಸಂಜೆ ವೇಳೆಗೆ ಅಧಿಕೃತವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯ ಹೊರಬೀಳಲಿದೆ.

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಸಲ್ಲಿಸಿರುವ ನಾಮಪತ್ರಗಳನ್ನು ಹಿಂಪಡೆಯಲು ಶುಕ್ರವಾರ ಅಂತಿಮ ದಿನವಾಗಿದ್ದು, ಸಂಜೆ ವೇಳೆಗೆ ಅಧಿಕೃತವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯ ಹೊರಬೀಳಲಿದೆ.

Add Asianetnews Kannada as a Preferred SourcegooglePreferred

ರಾಜಕೀಯ ಪಕ್ಷಗಳು, ಪಕ್ಷೇತರರು ಹಾಗೂ ಇತರರು ಸೇರಿ ಈಗಾಗಲೇ 3,374 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಶುಕ್ರವಾರ ಸಂಜೆವರೆಗೆ ಉಮೇದುವಾರಿಕೆ ಹಿಂಪಡೆಯಲು ಅವಕಾಶ ಇದೆ. ಬಳಿಕವಷ್ಟೇ ಅಖಾಡದಲ್ಲಿರುವ ಅಭ್ಯರ್ಥಿಗಳ ಅಧಿಕೃತ ಮಾಹಿತಿ ಲಭ್ಯವಾಗಲಿದೆ.

ಚುನಾವಣಾ ಆಯೋಗವು ನಾಮಪತ್ರ ಪರಿಶೀಲನೆ ಕಾರ್ಯ ನಡೆಸಿದ್ದು, ತಿರಸ್ಕೃತ ಅಭ್ಯರ್ಥಿಗಳ ಒಟ್ಟಾರೆ ಮಾಹಿತಿಯನ್ನು ಕಲೆ ಹಾಕುವಲ್ಲಿ ಆಯೋಗ ಸಿಬ್ಬಂದಿ ನಿರತರಾಗಿದ್ದಾರೆ. 3.374 ಅಭ್ಯರ್ಥಿಗಳ ಪೈಕಿ 3115 ಪುರುಷ ಅಭ್ಯರ್ಥಿಗಳು, 259 ಮಹಿಳಾ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಚುನಾವಣಾ ಅಖಾಡದಲ್ಲಿರುವ ಅಭ್ಯರ್ಥಿಗಳ ಹೆಸರು ಪ್ರಕಟಗೊಂಡ ಬಳಿಕ ಚುನಾವಣಾ ಪ್ರಚಾರ ಮತ್ತಷ್ಟುರಂಗೇರಲಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷದ ಟಿಕೆಟ್‌ ವಂಚಿತರು ಬಂಡಾಯವಾಗಿ ಕಣಕ್ಕಿಳಿದಿದ್ದು, ಅವರ ನಾಮಪತ್ರ ಹಿಂಪಡೆಯುವ ಬಗ್ಗೆ ಮನವೊಲಿಕೆ ಕೆಲಸ ನಡೆಯುತ್ತಿದೆ. ಒಂದು ವೇಳೆ ಬಂಡಾಯ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯದಿದ್ದರೆ ಅವರನ್ನು ಪಕ್ಷದ ಅಭ್ಯರ್ಥಿಗಳು ಕಣದಲ್ಲಿ ಎದುರಿಸಬೇಕಾಗುತ್ತದೆ.

ಶನಿವಾರದಿಂದ ಅಭ್ಯರ್ಥಿಗಳ ಪ್ರಚಾರಕ್ಕೆ ಪಕ್ಷದ ಪ್ರಮುಖ ನಾಯಕರ ದಂಡೇ ತೆರಳಲಿದ್ದು, ರಾಜಕೀಯ ಪಕ್ಷಗಳ ವಾಕ್ಸಮರ ಭರಾಟೆ ಜೋರಾಗಲಿದೆ. ಮೇ.12ರಂದು ಮತದಾನ ನಡೆಯಲಿದ್ದು, ಮೇ 10ರವರೆಗೆ ಪ್ರಚಾರ ಕಾರ್ಯ ಜರುಗಲಿದೆ.