ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಮುಹೂರ್ತ ಫಿಕ್ಸ್?
ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ಮುಹೂರ್ತ ಫಿಕ್ಸ್?
ಬೆಂಗಳೂರು : ಆಪರೇಷನ್ ಕಮಲದ ಭೀತಿ ಹಾಗೂ ತೀವ್ರಗೊಳ್ಳುತ್ತಿರುವ ಸಚಿವ ಸ್ಥಾನಾಕಾಂಕ್ಷಿಗಳ ಅತೃಪ್ತಿಯ ಬೇಗೆಯ ನಡುವೆಯೇ ಬುಧವಾರ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಅನಂತರ ಮಾಡಬೇಕೋ ಎಂಬ ಮಹತ್ವದ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಉಭಯ ಪಕ್ಷಗಳ ನಾಯಕರು ನಡೆಸಲಿದ್ದಾರೆ.
ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಸತತ ಪ್ರಯತ್ನ ಮಾಡುತ್ತಿರುವುದು ಮನದಟ್ಟಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಆತಂಕಕ್ಕೆ ಒಳಗಾಗಿದ್ದಾರೆ. ಸಚಿವ ಸಂಪುಟ ವಿಸ್ತರಣೆಯಾಗಬೇಕು ಎಂದು ಪಟ್ಟು ಹಿಡಿದಿರುವ ಪಕ್ಷದ ಅತೃಪ್ತ ಶಾಸಕರ ಬೇಡಿಕೆಯನ್ನು ಅಲಕ್ಷಿಸಿದರೆ ಅದು ಸರ್ಕಾರದ ಅಸ್ತಿತ್ವಕ್ಕೆ ಮಾರಕವಾಗಬಹುದು ಎಂಬ ಭೀತಿಯೂ ಇದೆ. ಇದೇ ವೇಳೆ ಸಂಪುಟ ವಿಸ್ತರಣೆ ಮಾಡಿದರೆ ಅಸಮಾಧಾನಗೊಳ್ಳುವ ಶಾಸಕರ ಗುಂಪೊಂದಕ್ಕೆ ಬಿಜೆಪಿಯತ್ತ ಸಾಗಲು ನಾವೇ ದಾರಿ ಮಾಡಿಕೊಟ್ಟಂತೆ ಆಗುತ್ತದೆ ಎಂಬ ಚಿಂತೆಯೂ ಇದೆ.
ಈ ಹಿನ್ನೆಲೆಯಲ್ಲಿ ಬುಧವಾರ ಸಂಜೆ 5ಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮನ್ವಯ ಸಮಿತಿ ಸಭೆಯಲ್ಲಿ ಒಂದು ಸ್ಪಷ್ಟನಿರ್ಧಾರ ಹಾಗೂ ತಾವು ಕೈಗೊಳ್ಳುವ ನಿರ್ಧಾರದಿಂದ ಶಾಸಕರು ಬಿಜೆಪಿಯತ್ತ ಧಾವಿಸದಂತೆ ತಡೆಯುವ ಕಾರ್ಯತಂತ್ರವನ್ನು ಹೆಣೆಯುವ ಪ್ರಯತ್ನ ಉಭಯ ಪಕ್ಷಗಳ ನಾಯಕರಿಂದ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ನಿಗಮ ಮಂಡಳಿ ಅಧ್ಯಕ್ಷರ ನೇಮಕದ ಬಗ್ಗೆಯೂ ಸಭೆ ತೀರ್ಮಾನ ಕೈಗೊಳ್ಳಬೇಕಿದೆ.
ಒಂದು ವೇಳೆ ಈ ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವ ನಿರ್ಧಾರವನ್ನು ಕೈಗೊಂಡರೆ ಅನಂತರದ ಬೆಳವಣಿಗೆಗಳು ಅತ್ಯಂತ ತ್ವರಿತವಾಗಿ ನಡೆಯಬೇಕಾದ ಅಗತ್ಯವಿದೆ. ಉಭಯ ಪಕ್ಷಗಳ ನಾಯಕರು ಸಂಪುಟ ವಿಸ್ತರಣೆ ಮಾಡುವುದೇ ಸೂಕ್ತ ಎಂದು ನಿರ್ಧರಿಸಿದ ನಂತರ ಕಾಂಗ್ರೆಸ್ ನಾಯಕರು ತಮ್ಮ ಹೈಕಮಾಂಡನ್ನು ಇದಕ್ಕೆ ಒಪ್ಪಿಸಬೇಕಿದೆ. ಈಗಾಗಲೇ ರಾಜ್ಯ ನಾಯಕರು ಹೈಕಮಾಂಡ್ ವರಿಷ್ಠರ ಭೇಟಿಗೆ ಸಮಯ ಕೇಳಿದ್ದಾರೆ. ಆದರೆ, ಮಂಗಳವಾರ ತಡರಾತ್ರಿಯವರೆಗೂ ಹೈಕಮಾಂಡ್ನಿಂದ ಈ ಕುರಿತು ರಾಜ್ಯ ನಾಯಕರಿಗೆ ಯಾವುದೇ ಸೂಚನೆ ಬಂದಿರಲಿಲ್ಲ.
ಆದರೆ, ಸಂಪುಟ ವಿಸ್ತರಣೆಯಾಗಲು ಡಿ.8ರೊಳಗೆ ರಾಜ್ಯ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಿ ಒಪ್ಪಿಗೆ ಪಡೆಯಬೇಕಿದೆ. ಏಕೆಂದರೆ, ಡಿ.8ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪಾಲ್ಗೊಳ್ಳುವಿಕೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಒಂದು ವೇಳೆ ಹೈಕಮಾಂಡ್ ಕೂಡ ಒಪ್ಪಿಗೆ ನೀಡಿದರೆ, ಆಗ ಡಿ.8ರ ಬೆಳಗ್ಗೆ ಅಥವಾ ಡಿ.9ರಂದು ಹೊಸ ಸಚಿವರ ಪ್ರಮಾಣ ವಚನ ನಡೆಸಬೇಕಾಗುತ್ತದೆ.
ಕೆಪಿಎಸ್ಸಿ ಅಧ್ಯಕ್ಷ ಸ್ಥಾನದ ಬಗ್ಗೆಯೂ ಚರ್ಚೆ:
ಒಂದು ಮೂಲದ ಪ್ರಕಾರ ಡಿ.10ರಂದು ವಿಧಾನ ಮಂಡಲ ಅಧಿವೇಶನ (ಅಂದೇ ಅಧಿವೇಶನ ಆರಂಭಗೊಳ್ಳಲಿದೆ)ವನ್ನು ಸಂತಾಪ ಸಲ್ಲಿಕೆ ಪ್ರಸ್ತಾಪದ ನಂತರ ಮುಂದೂಡಿ, ಸಂಜೆ ವೇಳೆಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯನ್ನು ಕಾಂಗ್ರೆಸ್ ನಾಯಕರು ಪರಿಶೀಲಿಸುತ್ತಿದ್ದಾರೆ. ಆದರೆ, ಇದಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡಬೇಕೋ ಅಥವಾ ಬೇಡವೋ ಎಂಬುದು ನಿರ್ಧಾರವಾಗಬೇಕು.
ಸಮನ್ವಯ ಸಮಿತಿ ಸಭೆಯಲ್ಲಿ ಸಂಪುಟ ವಿಸ್ತರಣೆ, ನಿಗಮ ಮಂಡಳಿ ವಿಚಾರ ಮಾತ್ರವಲ್ಲದೆ, ರಾಜ್ಯ ಸರ್ಕಾರವು ಕಾಂಗ್ರೆಸ್ ಪ್ರಣಾಳಿಕೆಯ ಅಂಶಗಳ ಅನುಷ್ಠಾನದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ. ಪ್ರಮುಖ ಹುದ್ದೆಗಳ ನೇಮಕಾತಿಯ ವೇಳೆ ಕಾಂಗ್ರೆಸ್ನ ಅಭಿಪ್ರಾಯವನ್ನು ಪರಿಗಣಿಸದ ಧೋರಣೆಯನ್ನು ಕಾಂಗ್ರೆಸ್ ಪ್ರಸ್ತಾಪಿಸಲಿದೆ. ಮುಖ್ಯವಾಗಿ ಶೀಘ್ರ ತೆರವಾಗಲಿರುವ ಕೆಪಿಎಸ್ಸಿ ಅಧ್ಯಕ್ಷ ಹುದ್ದೆ ನೇಮಕಾತಿ ವೇಳೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳದಂತೆ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೊದಲು ಕಾಂಗ್ರೆಸ್ ನಾಯಕರ ಸಭೆ
ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಸಬೇಕಾದ ವಿಚಾರಗಳು ಹಾಗೂ ಈ ವಿಚಾರಗಳ ಬಗ್ಗೆ ಪಕ್ಷದ ನಿಲುವು ಏನಾಗಿರಬೇಕು ಎಂಬ ಬಗ್ಗೆ ತೀರ್ಮಾನಿಸಲು ಈ ಸಭೆಗೂ ಮುನ್ನ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಬುಧವಾರ ನಡೆಯಲಿದೆ.
ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಆಸ್ಕರ್ ಫರ್ನಾಂಡಿಸ್, ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಕೆ.ಜೆ.ಜಾಜ್ರ್, ಮಾಜಿ ಸಚಿವರಾದ ರೋಷನ್ಬೇಗ್ ಸೇರಿದಂತೆ 16 ಮಂದಿ ಹಿರಿಯ ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಮೂಲಗಳು ತಿಳಿಸಿವೆ.