ಕರ್ನಾಟಕದ ಮಕ್ಕಳ ಪತ್ರದ ಬಗ್ಗೆ ಮನ್ ಕಿ ಬಾತ್'ನಲ್ಲಿ ಮೋದಿ ಪ್ರಸ್ತಾಪ
ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದ ತಮ್ಮ 38ನೇ ಮನ್ ಕಿ ಬಾತ್'ನಲ್ಲಿ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಕರ್ನಾಟಕದಿಂದ ಪತ್ರ ಬರೆದಿದ್ದ ಮಕ್ಕಳ ಬಗ್ಗೆ ಹೊಗಳಿಕೆ ಮಹಾಪೂರ ಹರಿಸಿದ್ದಾರೆ.
ಹೊಸದಿಲ್ಲಿ(ನ.26): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರದ ತಮ್ಮ 38ನೇ ಮನ್ ಕಿ ಬಾತ್'ನಲ್ಲಿ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿ ಕರ್ನಾಟಕದಿಂದ ಪತ್ರ ಬರೆದಿದ್ದ ಮಕ್ಕಳ ಬಗ್ಗೆ ಹೊಗಳಿಕೆ ಮಹಾಪೂರ ಹರಿಸಿದ್ದಾರೆ. ಮಕ್ಕಳು ಅನೇಕ ಸಮಸ್ಯೆಗಳ ಬಗ್ಗೆ ತಿಳಿಸಿ ತಮಗೆ ಪತ್ರ ಬರೆದಿದ್ದಾರೆ ಎಂದರು.
ಉತ್ತರ ಕನ್ನಡದ ಕೃತಿ ಹೆಗ್ಡೆ ಬಗ್ಗೆ ಪ್ರಸ್ತಾಪಿಸಿ ಆಕೆ ಡಿಜಿಟಲ್ ಇಂಡಿಯಾ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದ ಪಾರದರ್ಶಕತೆ ಬಗ್ಗೆ ಕೃತಿ ತಿಳಿಸಿದ್ದಾರೆ. ಇಂದಿನ ಮಕ್ಕಳು ಕ್ಲಾಸ್'ರೂಮ್ ಶಿಕ್ಷಣಕ್ಕಿಂತ ಪರಿಸರದೊಂದಿದೆ ಕಲಿಯಲು ಇಚ್ಛಿಸುತ್ತಾರೆ. ಮಕ್ಕಳಿಗೆ ಪರಿಸರದ ಜ್ಞಾನವೂ ಅಗತ್ಯವಾದುದು ಎಂದು ಪ್ರಧಾನಿ ಹೇಳಿದರು.
ಗದಗದ ಲಕ್ಷ್ಮೇಶ್ವರದ ರೀದಾ ನದಾಫ್ ಬಗ್ಗೆಯೂ ಮಾತನಾಡಿದ ಪ್ರಧಾನಿ, ನೀವು ಸೈನಿಕನ ಮಗಳಾಗಿರುವುದು ಹೆಮ್ಮೆ ಪಡಲೇಬೇಕಾದ ವಿಚಾರ ಎಂದರು. ಇನ್ನೋರ್ವ ಬಾಲಕಿ ಕಲಬುರ್ಗಿಯ ಇರ್ಫಾನ್ ಬೇಗಂ ಬಗ್ಗೆಯೂ ಕೂಡ ಪ್ರಸ್ತಾಪಿಸಿದರು.
ಬೇಗಂ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದು, ತನ್ನ ಮನೆಯಿಂದ 5 ಕಿ.ಮೀ ದೂರ ಇರುವ ಶಾಲೆಗೆ ನಿತ್ಯ ನಡೆದು ಹೋಗಬೇಕು. ಇದರಿಂದ ಬೇಗ ಮನೆಯಿಂದ ಹೊರಟರೆ ಮನೆಗೆ ವಾಪಸಾಗುವುದೆ ತಡವಾಗುತ್ತದೆ ಎಂದು ತಿಳಿಸಿದ್ದಾರೆ. ತಮ್ಮ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಪತ್ರದ ಮುಖೇನ ತಿಳಿಸುತ್ತಿರುವುದು ಸಮಸ್ಯೆಗಳ ಬಗ್ಗೆ ಅರಿಯಲು ಒಂದು ಉತ್ತಮವಾದ ವೇದಿಕೆಯಾಗಿದೆ ಎಂದು ಅಭಿಪ್ರಾಯ ಪಟ್ಟರು.