ಅಂತೂ ಇಂತೂ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಡಿಸೆಂಬರ್ 22ಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ದೋಸ್ತಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರು[ಡಿ.05] ಡಿಸೆಂಬರ್ 22ಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ನಿಗಮ ಮಂಡಳಿಗಳಿಗೂ ನೇಮಕ ಆಗಲಿದೆ ಎಂದು ಹೇಳಿದರು. ಸಚಿವ ಸಂಪುಟ ಸಭೆ ಬಳಿಕ ಬುಧವಾರ ಸಂಜೆ ಸಮನ್ವಯ ಸಮಿತಿ ಸಭೆ ನಡೆಯಿತು. ಸಭೆ ನಂತರ ಸಿದ್ದರಾಮಯ್ಯ ಸಭೆ ವಿವರಗಳನ್ನು ನೀಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗಾವಿ ಚಳಿಗಾಲದ ಅಧಿವೇಶನದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ರಾಹುಲ್ ಗಾಂಧಿ ಅವರೊಂದಿಗೂ ಚರ್ಚೆ ಮಾಡಿದ್ದೇನೆ. ಖಾಲಿ ಇರುವ ಎಲ್ಲ ಸ್ಥಾನಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.

ಡಿ.9ರ ಬದಲು 22, ಸಂಪುಟ ವಿಸ್ತರಣೆ ಸತ್ಯ ಹೇಳಿದ ಮಾಜಿ ಸಿಎಂ

ಡಿಸೆಂಬರ್ 9ರಂದೇ ಸಚಿವ ಸಂಪುಟ ವಿಸ್ತರಣೆ ಮಾಡಲು ತೀರ್ಮಾನ ಮಾಡಲಾಗಿತ್ತು. ಆದರೆ ಮರುದಿನವೇ ಬೆಳಗಾವಿ ಅಧಿವೇಶನ ಆರಂಭವಾಗುವ ಕಾರಣಕ್ಕೆ ಮುಂದಕ್ಕೆ ಹಾಕಿದ್ದೇವೆ. ಇನ್ನು ನಿಗಮ ಮಂಡಳಿಗಳಲ್ಲೂ ಎಂಎಲ್‌ಎಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಪಕ್ಷದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಎಲ್ಲ ಎಂಎಲ್‌ಗಳ ಅಭಿಪ್ರಾಯವನ್ನು ಪಡೆದುಕೊಂಡಿದ್ದೇನೆ. ರಮೇಶ್ ಜಾರಕಿಹೊಳಿ ಸೇರಿದಂತೆ ಯಾರೂ ಕಾಂಗ್ರೆಸ್ ತೊರೆಯುವುದಿಲ್ಲ. ಸಂಪುಟ ಸಭೆಗೆ ಬಾರದ ಕಾರಣಕ್ಕೆ ಅವರು ಪಕ್ಷ ಬಿಡುತ್ತಾರೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು ಎಂದು ಹೇಳಿದರು.

ಸಂಪುಟದಲ್ಲಿ ಒಟ್ಟು 8 ಸ್ಥಾನಗಳು ಖಾಲಿ ಇವೆ. ಇದರಲ್ಲಿ 6 ಸ್ಥಾನ ಕಾಂಗ್ರೆಸ್ ಪಾಲಿನದ್ದಾಗಿದ್ದರೆ ಇನ್ನುಳಿದ ಎರಡು ಸ್ಥಾನ ಜೆಡಿಎಸ್‌ಗೆ ಸೇರಿದ್ದು. ಜೆಡಿಎಸ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲವಾದರೂ ಕಾಂಗ್ರೆಸ್‌ನಲ್ಲಿ 6 ಸ್ಥಾನಗಳಿಗೆ ಪೈಪೋಟಿ ಇದೆ.