ನೀನೇ ಸಾಕಿದಾ ಗಿಣಿ ಹದ್ದಾಗಿ ಕುಕ್ಕಿತಲ್ಲೋ!| ಸಿದ್ದರಾಮಯ್ಯ ಬಗ್ಗೆ ರಮೇಶ್‌ ಕುಮಾರ್‌ ಅನುಕಂಪ

 ಬೆಂಗಳೂರು[ಸೆ.23]: ನೀನೇ ಸಾಕಿದಾ ಗಿಣಿ, ನಿನ್ನಾ ಮುದ್ದಿನಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ... ನಿನ್ನ ಹದ್ದಾಗಿ ಕುಕ್ಕಿತಲ್ಲೋ...

ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ಮಾನಸ ಸರೋವರ’ ಚಿತ್ರದ ಈ ಹಾಡಿನ ತುಣುಕು ಹಾಡುವ ಮೂಲಕ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾಗಿ ಅನರ್ಹಗೊಂಡಿರುವ ಶಾಸಕರನ್ನು ಪರೋಕ್ಷವಾಗಿ ಹದ್ದಿಗೆ ಹೋಲಿಸಿ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಸೆಂಟ್ರಲ್‌ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕಾ.ತ.ಚಿಕ್ಕಣ್ಣ ಸಂಪಾದಕತ್ವದ ‘ಸಿದ್ದರಾಮಯ್ಯ ಆಡಳಿತ -ಅಂತರಂಗ ಬಹಿರಂಗ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರೇ ಸಾಕಿದ ಗಿಣಿಗಳು (ಅನರ್ಹ ಶಾಸಕರು) ಹದ್ದಾಗಿ ಕುಕ್ಕಿರುವ ಗುರುತುಗಳು ಇನ್ನೂ ಹಾಗೇ ಇವೆ. ಆ ಗುರುತುಗಳಿಗೆ ಡ್ರೆಸ್ಸಿಂಗ್‌ ಮಾಡಬೇಕಿದೆ ಎಂದು ವೇದಿಕೆಯಲ್ಲಿದ್ದ ಸಿದ್ದರಾಮಯ್ಯ ಕಡೆ ನೋಡಿಕೊಂಡೇ ಹೇಳಿದರು. ಅಲ್ಲದೆ, ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಾದ ಸೋಲನ್ನು ಒಂದು ಕೆಟ್ಟಕನಸು ಎಂದು ಮರೆಯಬೇಕು. ಅಸಂಘಟಿತರಾಗಿರುವ ತಮ್ಮ ಅಭಿಮಾನಿಗಳು, ಬೆಂಬಲಿಗರನ್ನು ಸಂಘಟಿಸಿಕೊಂಡು ಮುಂದಿನ ದಾರಿ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.