ಕೇರಳದಿಂದ ಆಗಮಿಸಿದ ಬಿಎಸ್ವೈ ನೇರವಾಗಿ ಬೂಕನಕೆರೆಗೆ ಹೋಗಿದ್ದೇಕೆ?
ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತಮ್ಮ ಹುಟ್ಟೂರು ಮಂಡ್ಯದ ಬೂಕನಕೆರೆಯಲ್ಲಿ ಆಡಳಿತ ಪಕ್ಷದ ಮೇಲೆ ವಾಗ್ದಾಳಿ ಮಾಡಿದ್ದಾರೆ. ಕುಟುಂಬ ಸಮೇತ ಬಿಎಸ್ವೈ ಪೂಜೆಯೊಂದರಲ್ಲಿ ಪಾಲ್ಗೊಂಡಿದ್ದರು.
ಮಂಡ್ಯ]ಡಿ.07] ಕೇರಳದಿಂದ ಆಗಮಿಸಿರುವ ಯಡಿಯೂರಪ್ಪ ನೇರವಾಗಿ ತಮ್ಮ ಹುಟ್ಟೂರು ಬೂಕನಕೆರೆಗೆ ಭೇಟಿ ನೀಡಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿ ವರ್ಷ ಹುಟ್ಟೂರಿನಲ್ಲಿ ಹಿರಿಯರ ಹಬ್ಬ ಇರುತ್ತೆ ಪ್ರತಿ ವರ್ಷ ಬರ್ತೀನಿ. ಗವಿಮಠದಸಿದ್ದಲಿಂಗೇಶ್ವರ ಸನ್ನಿಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದೇನೆ ಎಂದು ತಿಳಿಸಿದರು.
ಬೆಳಗಾವಿ ಅಧಿವೇಶನಕ್ಕೆ ಸಿದ್ದತೆ ನಡೆದಿದೆ. 1 ಲಕ್ಷ ಜನರನ್ನ ಸೇರಿಸಿ ದೊಡ್ಡ ಹೋರಾಟ ಮಾಡ್ತೀವಿ. ರೈತರಿಗೆ ಸಾಲಮನ್ನಾ ವಿಚಾರದಲ್ಲಿ ಸುಳ್ಳು ಭರವಸೆ ನೀಡಲಾಗಿದೆ. 100 ತಾಲ್ಲೂಕಿನಲ್ಲಿ ಭೀಕರ ಬರವಿದ್ದರೂ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಸ್ವತಃ ಸಿಎಂ ಕ್ಷೇತ್ರದಲ್ಲಿ ರೈತರಿಗೆ ಬ್ಯಾಂಕ್ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ಆದ್ರೆ ಯಾವುದೇ ತೊಂದರೆ ಆಗದಂತೆ ನೋಡ್ಕೋತಿವಿ ಅಂತಾರೆ ಈ ಎಲ್ಲ ವಿಚಾರಗಳನ್ನು ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ ಎಂದು ಬಿಎಸ್ವೈ ತಿಳಿಸಿದ್ದಾರೆ.
ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ, ಬೆಂಬಲ ಬೆಲೆ ನೀಡಿ ರೈತರನ್ನ ಉಳಿಸುವ ಕೆಲಸ ಮಾಡಲಿ ಅದನ್ನು ಬಿಟ್ಟು ಭತ್ತ ನಾಟಿ ಮಾಡಿ ತೋರ್ಪಡಿಕೆ ಪ್ರೀತಿ ತೋರಿಸುವ ಅಗತ್ಯ ಇಲ್ಲ. ಸಿಎಂ ಆದವರು ನಾಟಿ ಮಾಡೋಕೆ ಹೋಗಲಿ ನಮ್ಮದೇನು ಅಭ್ಯಂತರವಿಲ್ಲ. ಆದರೆ ಇದರಿಂದ ಏನು ಉಪಯೋಗವಿಲ್ಲ ಎಂದು ಕುಮಾರಸ್ವಾಮಿ ವಿರುದ್ದ ಯಡಿಯೂರಪ್ಪ ವಾಗ್ದಾಳಿ ಮಾಡಿದರು.
ರಾಜಸ್ಥಾನದಲ್ಲಿ ಗೆಲುವು ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ. ಮಧ್ಯಪ್ರದೇಶ ಮತ್ತು ಛತ್ತೀಸ್ ಘಡ ಗೆಲ್ತೀವಿ ಈ ಬಗ್ಗೆ ಫಲಿತಾಂಶದ ಬಳಿಕ ಮಾತಾಡ್ತೀನಿ ಎಂದು ಬಿಎಸ್ ಯಡಿಯೂರಪ್ಪ ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಮಾತನಾಡಿ, ವಿಶೇಷ ಪೂಜೆ ಇದು, ಎಲ್ಲರೂ ಕುಟುಂಬ ಸಮೇತ ಪ್ರತಿವರ್ಷ ತಪ್ಪದೇ ಬರ್ತೀವಿ. ಇದು ನಮ್ಮ ಪದ್ದತಿ, ಗ್ರಾಮ ದೇವತೆ, ಗವಿಮಠಕ್ಕೂ ಹೋಗಿ ಆಶೀರ್ವಾದ ಪಡೆದಿದ್ದೇವೆ. ಗ್ರಾಮಕ್ಕೆ ಬಂದಾಗ ತಪ್ಪದೇ ಬಾಲ್ಯ ಜೀವನ ನೆನಪಾಗುತ್ತೆ. ಸಂತೆಯಲ್ಲಿ ಭಾಗಿಯಾಗುತ್ತಿದ್ದೆವು. ಅಪ್ಪ ಸಿಎಂ ಆಗಲಿ ಅಂತ ವಿಶೇಷ ಪೂಜೆ ಏನು ಮಾಡಿಸಿಲ್ಲ. ಇಡೀ ರಾಜ್ಯದ ಜನ ಯಡಿಯೂರಪ್ಪ ಸಿಎಂ ಆಗಬೇಕೆಂಬ ಅಪೇಕ್ಷೆ ಹೊಂದಿದ್ದಾರೆ. 104 ಸ್ಥಾನ ಪಡೆದ ಯಡಿಯೂರಪ್ಪ ಅಧಿಕಾರಕ್ಕೆ ಬರಬೇಕೆಂದು ನಿರೀಕ್ಷಿಸುತ್ತಿದ್ದಾರೆ ಎಂದು ಬಿಎಸ್ವೈ ಸಿಎಂ ಕನಸಿನ ಬಗ್ಗೆ ಮತ್ತೆ ಮಾತನಾಡಿದರು.