‘ರಾಹುಲ್ ರಾಜೀನಾಮೆಗಾಗಿ ಒಂದು ತಿಂಗಳು ವೇಸ್ಟ್ ಆಯ್ತು’| ಸ್ವಪಕ್ಷದ ವಿರುದ್ಧ ಹಿರಿಯ ಕಾಂಗ್ರೆಸ್ಸಿಗ ಕರಣ್ ಸಿಂಗ್ ಅಸಮಾಧಾನ| ಕೂಡಲೇ ನೂತನ ಅಧ್ಯಕ್ಷ ಹಾಗೂ ನಾಲ್ವರು ಉಪಾಧ್ಯಕ್ಷರ ನೇಮಕಕ್ಕೆ ಕರಣ್ ಒತ್ತಾಯ| ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಗೆ ಆಗ್ರಹ|
ನವದೆಹಲಿ(ಜು.08): ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಲು, ಕಾಂಗ್ರೆಸ್ ಒಂದು ತಿಂಗಳು ಕಾಲಹರಣ ಮಾಡಿತು ಎಂದು ಹಿರಿಯ ಕಾಂಗ್ರೆಸ್ಸಿಗ ಕರಣ್ ಸಿಂಗ್ ಹರಿಹಾಯ್ದಿದ್ದಾರೆ.
ಒಂದು ತಿಂಗಳ ಸಮಯ ಹಾಳು ಮಾಡುವ ಬದಲು ಕೂಡಲೇ ರಾಹುಲ್ ರಾಜೀನಾಮೆ ಅಂಗೀಕರಿಸಿ, ಪಕ್ಷಕ್ಕೆ ಮಧ್ಯಂತರ ಅಧ್ಯಕ್ಷರನ್ನು ನೇಮಿಸಬೇಕಿತ್ತು ಕರಣ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಕೂಡಲೇ ಸಭೆ ಸೇರಿ, ನೂತನ ಅಧ್ಯಕ್ಷ ಹಾಗೂ ನಾಲ್ವರು ಉಪಾಧ್ಯಕ್ಷರನ್ನು ನೇಮಿಸಬೇಕು ಎಂದು ಕರಣ್ ಸಿಂಗ್ ಆಗ್ರಹಿಸಿದ್ದಾರೆ.
ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಭಾಗಕ್ಕೆ ಒಬ್ಬೊಬ್ಬರಂತೆ ನಾಲ್ವರು ಉಪಾಧ್ಯಕ್ಷರನ್ನು ನೇಮಿಸಿ, ಕೇಂದ್ರದಲ್ಲಿ ಓರ್ವ ಅಧ್ಯಕ್ಷರನ್ನು ನೇಮಿಸುವುದು ಉತ್ತಮ ಎಂದು ಕರಣ್ ಸಿಂಗ್ ಸಲಹೆ ನೀಡಿದ್ದಾರೆ.
