ಮದ್ಯವ್ಯಸನ ಬಿಡಲು ಖ್ಯಾತ ನಟ ಕಪಿಲ್ಗೆ ಬೆಂಗಳೂರಿನಲ್ಲಿ ಚಿಕಿತ್ಸೆ
ಅತಿಯಾದ ಮದ್ಯಪಾನ ವ್ಯಸನದಿಂದಾಗಿ ಪದೇ ಪದೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕಪಿಲ್, ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಆರ್ಯುವೇದ ಆಶ್ರಮವೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಮುಂಬೈ: ಕಿರುತೆರೆಯ ಸೂಪರ್ಸ್ಟಾರ್, ಕಾಮಿಡಿ ವಿತ್ ಕಪಿಲ್ ಖ್ಯಾತಿಯ ವಿದೂಷಕ ಕಪಿಲ್ ಶರ್ಮಾ, ಇದೀಗ ಬೆಂಗಳೂರಿನ ಆಶ್ರಮವೊಂದನ್ನು ಸೇರಿಕೊಂಡಿದ್ದಾರೆ. ಅತಿಯಾದ ಮದ್ಯಪಾನ ವ್ಯಸನದಿಂದಾಗಿ ಪದೇ ಪದೇ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಕಪಿಲ್, ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಆರ್ಯುವೇದ ಆಶ್ರಮವೊಂದರಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ವಿಷಯವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ.
ಟೀವಿ ಕಾಮಿಡಿ ಶೋಗಳಿಗೆ, ಬಾಲಿವುಡ್ ಹೀರೋಗಳಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ಕಪಿಲ್, ಇದೇ ಅವಧಿಯಲ್ಲಿ ಮದ್ಯವ್ಯಸನಕ್ಕೆ ತುತ್ತಾಗಿ, ಶೋಗಳಿಂದ ಹೊರಬಿದ್ದಿದ್ದರು. ಹೀಗಾಗಿ ಕಳೆದ ವರ್ಷವೇ ಬೆಂಗಳೂರಿಗೆ ಆಗಮಿಸಿ ಚಿಕಿತ್ಸೆಗೆ ದಾಖಲಾಗಿದ್ದರಾದರೂ, ಮಧ್ಯದಲ್ಲೇ ಆಶ್ರಮ ತೊರೆದು ಮುಂಬೈಗೆ ಹೋಗಿ, ಮತ್ತೆ ಸಮಸ್ಯೆಗೆ ಸಿಕ್ಕಿಬಿದ್ದಿದ್ದರು.
ಆದರೆ ಇದೀಗ ಖ್ಯಾತ ನಟ ಅಕ್ಷಯ್ ಕುಮಾರ್ ಅವರ ಪತ್ನಿ ಟ್ವಿಂಕಲ್ ಬರೆದ ಪುಸ್ತಕವೊಂದರಿಂದ ಪ್ರಭಾವಿತರಾಗಿರುವ ಕಪಿಲ್, ಈ ಬಾರಿ ವ್ಯಸನಮುಕ್ತರಾಗಿ ಹೊರಹೊಮ್ಮುವ ಕಠಿಣ ನಿರ್ಧಾರದೊಂದಿಗೆ ಬೆಂಗಳೂರಿನ ಆಶ್ರಮಕ್ಕೆ ಆಗಮಿಸಿದ್ದಾರಂತೆ.