ನುಡಿ ಜಾತ್ರೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದ ಉದ್ದಕ್ಕೂ ಕನ್ನಡಾಭಿಮಾನ ಮೆರೆದರು. ಮಾತೃಭಾಷೆ ಶಿಕ್ಷಣಕ್ಕೆ ನಮ್ಮ ಸರ್ಕಾರ ಬದ್ಧ ಎಂದು ತಿಳಿಸಿದರು.

ಮಲ್ಲಿಗೆ ನಗರಿ ಮೈಸೂರಿನಲ್ಲಿ ಕನ್ನಡ ಕಲರವಕ್ಕೆ ಭರ್ಜರಿ ಚಾಲನೆ ಸಿಕ್ಕಿದೆ. 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಸಾಂಸ್ಕೃತಿಕ ವೈಭವದೊಂದಿಗೆ ಅನಾವರಣಗೊಂಡಿದೆ. ನಾಡಿನ ಮೂಲೆ-ಮೂಲೆಗಳಿಂದ ಬಂದಿದ್ದ ಸಹಸ್ರಾರು ಕನ್ನಡಿಗರು ನುಡಿ ಜಾತ್ರೆಯಲ್ಲಿ ಮಿಂದೆದ್ದರು.

Add Asianetnews Kannada as a Preferred SourcegooglePreferred

27 ವರ್ಷಗಳ ಬಳಿಕ ಸಾಂಸ್ಕೃತಿಕ ನಗರಿಯಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡಾಭಿಮಾನ ಹೆಚ್ಚಿಸಿದೆ. ಎಲ್ಲಾ ರಸ್ತೆ, ವೃತ್ತಗಳು ಕನ್ನಡದ ಧ್ವಜ ತೋರಣಗಳಿಂದ ಕಂಗೊಳಿಸಿ, ಹಬ್ಬದ ವಾತಾವರಣ ಸೃಷ್ಟಿಸಿದೆ. ಸಮ್ಮೇಳನಾಧ್ಯಕ್ಷ ಡಾ. ಚಂದ್ರಶೇಖರ್​ ಪಾಟೀಲರ ತೆರೆದ ಸಾರೋಟಿನ ಮೆರವಣಿ ನಾಡಿನ ಗತ ಪರಂಪರೆಯನ್ನ ಮೆಲಕು ಹಾಕುವಂತಿತ್ತು. ಮೆರವಣಿಗೆಯಲ್ಲಿನ ಮನಮೋಹಕ ಸ್ತಬ್ದ ಚಿತ್ರಗಳು ಮೆರವಣಿಗೆ ಮೆರಗನ್ನು ಹೆಚ್ಚಿಸಿದವು.ಮಹಾರಾಜ ಕಾಲೇಜಿನ ಪ್ರಧಾನ ವೇದಿಕೆ ಮುಂಭಾಗ ನಡೆದ ಸಮ್ಮೇಳನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲೇ ಸಚಿವ ಸೇಠ್​ಗೆ ತರಾಟೆ

ಇನ್ನೂ ಸಮ್ಮೇಳನಾಧ್ಯಕ್ಷ ಚಂಪಾ ತಮ್ಮ ಭಾಷಣದಲ್ಲಿ ಸಿಎಂ ಎದುರೇ ಸಚಿವ ಸೇಠ್​ರನ್ನು ತರಾಟೆ ತೆಗೆದುಕೊಂಡ್ರು. ಶಿಕ್ಷಣದ ಜವಾಬ್ದಾರಿ ಹೊರುವ ಸಾಮರ್ಥ್ಯ ಸಚಿವರಗಿಲ್ಲ.. ಹೀಗಾಗಿ ಅವರ ರಾಜೀನಾಮೆ ಪಡೆಯಿರಿ ಎಂದರು. ನಂತರ ಪ್ರಧಾನಿ ಮೋದಿ ಯಾರಿಗೂ ಅರ್ಥವಾಗದ ಮಾತಿನ ಸರದಾರ ಎಂದು ಚಾಟಿ ಬೀಸಿದರು.

ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ

ನುಡಿ ಜಾತ್ರೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದ ಉದ್ದಕ್ಕೂ ಕನ್ನಡಾಭಿಮಾನ ಮೆರೆದರು. ಮಾತೃಭಾಷೆ ಶಿಕ್ಷಣಕ್ಕೆ ನಮ್ಮ ಸರ್ಕಾರ ಬದ್ಧ ಎಂದು ತಿಳಿಸಿದರು. ಪ್ರತಿ ವರ್ಷದಂತೆ ಈ ವರ್ಷವೂ ಸಹ ಊಟದಲ್ಲಿ ಹಲವು ಯಡವಟ್ಟುಗಳಾಗಿ, ಸಹಸ್ರಾರು ಜನರು ಊಟಕ್ಕಾಗಿ ಒಂದೇ ಸಲ ಆಗಮಿಸಿದ್ದರಿಂದ ನಿಯಂತ್ರಿಸಲಾಗದೇ ಪೊಲೀಸರು ಲಾಠಿ ರುಚಿ ತೋರಿಸಿದರು.

ಇನ್ನೂ ಸಮ್ಮೇಳನಾಧ್ಯಕ್ಷ ಚಂಪಾ ಅರಮನೆ ಆವರಣದಲ್ಲಿ ತಾಯಿ ಭುವನೇಶ್ವರಿ ದರ್ಶನ ಪಡೆಯಲಿಲ್ಲ. ಅಭಿಮಾನಕ್ಕೆಂದು ಹಾಕಿದ ಮೈಸೂರು ಪೇಟವನ್ನೂ ತಿರಸ್ಕರಿಸಿದ್ದು ಅಭಿಮಾನಿಗಳಿಗೆ ಇರಿಸು ಮುರಿಸಾಯಿತು.