ನನ್ನ ಮೇಲೆ ಹಲ್ಲೆ ನಡೆಸಿದ್ದವನು ಇವನೇ, ಇವನೇ ಇವನೇ...!
ಜೈಲಿನ ಆವರಣದಲ್ಲಿ ಮಧ್ಯಾಹ್ನ 3.30ರಿಂದ 4 ಗಂಟೆಯರೆಗೆ ಗುರುತು ಪತ್ತೆ ಪ್ರಕ್ರಿಯೆ ನಡೆದಿದ್ದು, ಜ್ಯೋತಿ ಉದಯ್ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿದಾರನಾಗಿರುವ ಹಿಂದೂಪುರದ ಮೊಬೈಲ್ ಮಾರಾಟಗಾರ ಮುಜೀಬ್ ಪಾಲ್ಗೊಂಡಿದ್ದರು.
ಬೆಂಗಳೂರು: ‘ನನ್ನ ಮೇಲೆ ಹಲ್ಲೆ ನಡೆಸಿದ್ದವನು ಇವನೇ, ಇವನೇ, ಇವನೇ...!'
- ಇದು ಮೂರು ವರ್ಷಗಳ ಬಳಿಕ ತನ್ನ ಮೇಲೆ ಭೀಕರವಾಗಿ ಹಲ್ಲೆಗೈದಿದ್ದ ಆರೋಪಿ ಮಧುಕರರೆಡ್ಡಿ ಎದುರಾದಾಗ ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಉದ್ವೇಗದಿಂದ ಉದ್ಗರಿಸಿದ ಪರಿ.
ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಯಲಹಂಕ ತಹಶೀಲ್ದಾರ್ ಅವರು ಶುಕ್ರವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಜ್ಯೋತಿ ಉದಯ್ ಅವರಿಂದ ಆರೋಪಿಯ ಗುರುತು ಪತ್ತೆ (ಐಡೆಂಟಿಫಿಕೇಷನ್ ಪರೇಡ್) ಪ್ರಕ್ರಿಯೆ ನಡೆಸಿದರು. ಇಡೀ ಪ್ರಕ್ರಿಯೆಯಲ್ಲಿ ಪೊಲೀಸರನ್ನು ಹೊರಗಿಡಲಾಗಿತ್ತು ಎಂದು ತಿಳಿದು ಬಂದಿದೆ.
ಎಟಿಎಂನಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣದ ಸಂಬಂಧ ಮಧ್ಯಾಹ್ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪ್ರತಿವಾದಿ ಮತ್ತು ಸಾಕ್ಷಿದಾರರಿಂದ ಆರೋಪಿ ಗುರುತು ಪತ್ತೆ ನಡೆಸಲಾಯಿತು. ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವೆ ಎಂದು ಯಲಹಂಕ ತಹಶೀಲ್ದಾರ್ ‘ಕನ್ನಡಪ್ರಭ'ಕ್ಕೆ ತಿಳಿಸಿದರು. ಆದರೆ, ಹೆಚ್ಚಿನ ವಿವರ ನೀಡಲು ಅವರು ನಿರಾಕರಿಸಿದರು.
ಜೈಲಿನ ಆವರಣದಲ್ಲಿ ಮಧ್ಯಾಹ್ನ 3.30ರಿಂದ 4 ಗಂಟೆಯರೆಗೆ ಗುರುತು ಪತ್ತೆ ಪ್ರಕ್ರಿಯೆ ನಡೆದಿದ್ದು, ಜ್ಯೋತಿ ಉದಯ್ ಹಾಗೂ ಪ್ರಕರಣದ ಪ್ರಮುಖ ಸಾಕ್ಷಿದಾರನಾಗಿರುವ ಹಿಂದೂಪುರದ ಮೊಬೈಲ್ ಮಾರಾಟಗಾರ ಮುಜೀಬ್ ಪಾಲ್ಗೊಂಡಿದ್ದರು. ಎಟಿಎಂ ಹಲ್ಲೆ ಕೃತ್ಯದ ಬಳಿಕ ರೆಡ್ಡಿ, ಹಿಂದೂಪುರದಲ್ಲಿ ಮೊಬೈಲ್ ಮಾರಾಟ ಮುಜೀಬ್'ಗೆ ಜ್ಯೋತಿ ಉದಯ್ ಅವರ ಮೊಬೈಲ್ ಮಾರಾಟ ಮಾಡಿದ್ದ. ಹಾಗಾಗಿ ಮೊಬೈಲ್ ಮಳಿಗೆ ಮಾಲೀಕನನ್ನು ಪ್ರಕರಣದ ಸಾಕ್ಷಿದಾರನನ್ನಾಗಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ
epaper.kannadaprabha.in