ಕನ್ಹಯ್ಯ, ಖಾಲಿದ್ ವಿರುದ್ಧದ ಶಿಕ್ಷೆ : ಸಮ್ಮತಿ
ದೇಶದ್ರೋಹ ಪ್ರಕರಣ ಸಂಬಂಧ ಕನ್ಹಯ್ಯ ಹಾಗೂ ಖಾಲಿದ್ ವಿರುದ್ಧದ ಶಿಕ್ಷೆಯ ಕ್ರಮವನ್ನು ಜೆಎನ್ ಯು ಉನ್ನತ ಮಟ್ಟದ ತನಿಖಾ ಸಮಿತಿ ಸಮರ್ಥಿಸಿಕೊಂಡಿದೆ.
ನವದೆಹಲಿ: ಇಲ್ಲಿನ ಜವಾಹರಲಾಲ್ ನೆಹರೂ ವಿವಿಯಲ್ಲಿ 2016ರ ಫೆ.9ರಂದು ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ದೇಶದ್ರೋಹದ ಹೇಳಿಕೆ ನೀಡಿದ್ದಾರೆ ಎನ್ನಲಾದ ಉಮರ್ ಖಾಲಿದ್ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳ ಉಚ್ಚಾಟನೆ ಮತ್ತು ಆಗ ಜೆಎನ್ಯು ವಿದ್ಯಾರ್ಥಿ ಘಟಕದ ಅಧ್ಯಕ್ಷರಾಗಿದ್ದ ಕನ್ಹಯ್ಯ ಕುಮಾರ್ ಮೇಲೆ 10000 ರು. ದಂಡ ವಿಧಿಸುವ ಕ್ರಮವನ್ನು ಜೆಎನ್ಯುನ ಉನ್ನತ ಮಟ್ಟದ ತನಿಖಾ ಸಮಿತಿ ಸಮರ್ಥಿಸಿಕೊಂಡಿದೆ.
ಜೆಎನ್ಯುನಲ್ಲಿ 2016ರ ಫೆಬ್ರವರಿ 9ರಂದು ಏರ್ಪಡಿಸಲಾಗಿದ್ದ ಉಗ್ರ ಅಫ್ಜಲ್ ಗುರುವಿನ ಸ್ಮರಣೆ ಕಾರ್ಯಕ್ರಮದಲ್ಲಿ ಉಮರ್ ಖಾಲಿದ್, ಕನ್ಹಯ್ಯ ಕುಮಾರ್ ಸೇರಿದಂತೆ ಇತರರು ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದರು ಎಂಬುದು ಆರೋಪ. ಈ ಹಿನ್ನೆಲೆಯಲ್ಲಿ ಕಾಲೇಜಿನ ನಿಯಮಗಳನ್ನು ಉಲ್ಲಂಘಿಸಿದ ಇತರೆ 13 ವಿದ್ಯಾರ್ಥಿಗಳ ಮೇಲೆಯೂ ಐವರು ಸದಸ್ಯರ ನೇತೃತ್ವದ ಸಮಿತಿ ದಂಡ ವಿಧಿಸಿದೆ. ಉಗ್ರ ಅಫ್ಜಲ್ ಗುರು ಕಾರ್ಯಕ್ರಮದಲ್ಲಿ ದೇಶದ್ರೋಹದ ಹೇಳಿಕೆ ನೀಡಿದ ಕಾರಣಕ್ಕಾಗಿ ಕನ್ಹಯ್ಯ, ಖಾಲಿದ್, ಅನಿರ್ಬನ್ ಭಟ್ಟಾಚಾರ್ಯರನ್ನು ದೇಶದ್ರೋಹ ಆರೋಪದ ಮೇರೆಗೆ ಬಂಧಿಸಲಾಗಿತ್ತು.