ಪಕ್ಷ ತೊರೆಯುತ್ತಾರಾ ಎಚ್.ವಿಶ್ವನಾಥ್ ?
ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್. ವಿಶ್ವನಾಥ್ ಹೇಳಿಕೆ ಇದೀಗ ಮತ್ತೊಂದು ಸೂಚನೆ ನೀಡಿದಂತಿದೆ.ಪಕ್ಷ ತೊರೆಯುತ್ತಾರಾ ಎನ್ನುವ ಅನುಮಾನ ಮೂಡಿದೆ.
ಮಡಿಕೇರಿ : ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ಹೇಳಿಕೆಯೊಂದು ಇದೀಗ ಪಕ್ಷವನ್ನೇ ತೊರೆಯುವ ಮುನ್ಸೂಚನೆಯಂತೆ ಕಂಡು ಬಂದಿದೆ.
ಮಡಿಕೇರಿಯಲ್ಲಿ ಮಾತನಾಡಿದ ಎಚ್.ವಿಶ್ವನಾಥ್ ರಾಜ್ಯ ರಾಜಕಾರಣ ಮಲಿನವಾಗಿದೆ. ರಾಜಕಾರಣವನ್ನು ಶುದ್ಧ ಮಾಡುವ ಅಗತ್ಯತೆ ಇದೆ.ಈಗಾಗಲೇ ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ನಾಣಯ್ಯ ಅವರೊಂದಿಗೆ ಚರ್ಚಿಸಿದ್ದು, ಈ ನಿಟ್ಟಿನಲ್ಲಿ ಮುಂದೆ ಸಮಾನ ಮನಸ್ಕರು ಒಂದೆಡೆ ಸೇರಿ ಚರ್ಚಿಸುತ್ತೇವೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ತಮ್ಮ ರಾಜೀನಾಮೆ ಅಂಗೀಕಾರವಾಗಿಲ್ಲ. ಜೆಡಿಎಸ್ ಮುಖಂಡರಾದ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿ ಈ ಬಗ್ಗೆ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ನಾನು ಕೂಡ ರಾಜೀನಾಮೆ ಅಂಗೀಕರಿಸುವಂತೆ ಮನವೊಲಿಸುತ್ತಿದ್ದೇನೆ. ಮುಂದೆ ಜೆಡಿಎಸ್ ನ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ವಿಶ್ವನಾಥ್ ಹೇಳಿದರು.
ತಾವೀಗ ತೊರೆದಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದತ್ತಣ್ಣ [ವೈ ಎಸ್ ವಿ ದತ್ತ], ಮಧು ಬಂಗಾರಪ್ಪ ಸಮರ್ಥರಿದ್ದಾರೆ ಎಂದರು.
ಇದೇ ವೇಳೆ ದಲಿತ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಬೇಕೆನ್ನುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಜೆಡಿಎಸ್ ಕೋಟಾದಲ್ಲಿ ಇನ್ನೂ ಎರಡು ಸಚಿವ ಸ್ಥಾನಗಳು ರಾಜ್ಯದಲ್ಲಿ ಬಾಕಿ ಇದ್ದು, ಇದರಲ್ಲಿ ಒಂದನ್ನು ದಲಿತ ಹಾಗೂ ಮತ್ತೊಂದು ಅಲ್ಪ ಸಂಖ್ಯಾತರಿಗೆ ಕೊಡುವುದು ಸೂಕ್ತ ಎಂದು ವಿಶ್ವನಾಥ್ ಹೇಳಿದರು.