ಶೀಘ್ರ ಕಾಂಗ್ರೆಸ್-ಜೆಡಿಸ್ ಹಲವರು ಬಿಜೆಪಿಗೆ : ಜೋಶಿ
ಬೇರೆ ಪಕ್ಷಗಳಿಂದ ಬಿಜೆಪಿಗೆ ಹಲವು ಮುಖಂಡರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಆದರೆ ಯಾರಿಗೆ ಗೆಲ್ಲುವ ಅವಕಾಶವಿದೆಯೋ? ಯಾರು ಬಿಜೆಪಿ ಸಿದ್ಧಾಂತಕ್ಕೆ ಒಗ್ಗಿಕೊಳ್ಳುತ್ತಾರೋ ಅಂಥವರನ್ನು ಪಕ್ಷ ಸ್ವಾಗತಿಸುತ್ತದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ಬೆಂಗಳೂರು : ಬೇರೆ ಪಕ್ಷಗಳಿಂದ ಬಿಜೆಪಿಗೆ ಹಲವು ಮುಖಂಡರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಆದರೆ ಯಾರಿಗೆ ಗೆಲ್ಲುವ ಅವಕಾಶವಿದೆಯೋ? ಯಾರು ಬಿಜೆಪಿ ಸಿದ್ಧಾಂತಕ್ಕೆ ಒಗ್ಗಿಕೊಳ್ಳುತ್ತಾರೋ ಅಂಥವರನ್ನು ಪಕ್ಷ ಸ್ವಾಗತಿಸುತ್ತದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಪಕ್ಷ ಈ ಸಲ ಅಧಿಕಾರಕ್ಕೆ ಬರುವುದು ಗ್ಯಾರಂಟಿ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಜೆಡಿಎಸ್ಗಳಿಂದ ಸಾಕಷ್ಟು ಜನ ಪಕ್ಷ ಸೇರಲು ಬರುತ್ತಿದ್ದಾರೆ. ಯಾರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ಪಕ್ಷದ ವರಿಷ್ಠರು ನಿರ್ಧರಿಸಲಿದ್ದಾರೆ ಎಂದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾ.30, 31ರಂದು ಮೈಸೂರು ಭಾಗದಲ್ಲಿ ಪ್ರವಾಸ ಕೈಗೊಳ್ಳುವ ವೇಳೆ ರಾಜವಂಶಸ್ಥ ಯದುವೀರ ಅವರನ್ನು ಭೇಟಿಯಾಗಲಿದ್ದಾರೆ. ಇದು ಬರೀ ಸೌಹಾರ್ದ ಭೇಟಿ ಅಷ್ಟೆ. ಇದಕ್ಕೆ ರಾಜಕೀಯ ಲೇಪನ ಬಳಿಯುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ಬಹಳ ಹಿಂದೆಯೇ ಬಿಜೆಪಿ ಚುನಾವಣಾ ಪ್ರಚಾರ ಆರಂಭಿಸಿದೆ. ಮೈಸೂರು ಭಾಗದ ಪ್ರವಾಸ ಮುಗಿಸಿಕೊಂಡು ಅಮಿತ್ ಶಾ ಅವರು ಏ.2, 3ರಂದು ಬೆಳಗಾವಿ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಿಗೂ ಭೇಟಿ ನೀಡಲಿದ್ದಾರೆ ಎಂದ ಅವರು, ಟಿಕೆಟ್ ಹಂಚಿಕೆ ಸಭೆಗಳು ಇದೇ ವೇಳೆ ನಡೆಯಲಿವೆ ಎಂದರು.
ಈ ಸಲ ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾಗುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಜೋಶಿ, ಸಿದ್ದರಾಮಯ್ಯ ಕಾಂಗ್ರೆಸ್ನ ಕೊನೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದರು.