Asianet Suvarna News Asianet Suvarna News

ಕಳೆದ 17 ವರ್ಷದಿಂದ 'ಅಮ್ಮ'ನ ಸಂಪರ್ಕ ಇಲ್ಲದ ಸುಧಾಕರನ್ ನಿನ್ನೆ ಪ್ರತ್ಯಕ್ಷ

Jayalalitha foster son sudhakaran came to see Amma after 17 years

ಚೆನ್ನೈ(ಅ.07): ಕಳೆದ 17 ವರ್ಷದಿಂದ ಸಾಕು ತಾಯಿಯನ್ನು ನೋಡಲು ಬಾರದೇ ಇದ್ದ ಸಾಕು ಮಗ ಸುಧಾಕರನ್, ನಿನ್ನೆ ಸಂಜೆ ಏಕಾಏಕಿ ಜಯಲಲಿತಾ ಅವರ ಆರೋಗ್ಯವನ್ನು ವಿಚಾರಿಸಲು ಆಗಮಿಸಿದ್ದು ಎಲ್ಲರಲ್ಲೂ ಅಚ್ಚರಿಯನ್ನುಂಟು ಮಾಡಿತ್ತು. ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಜಯಾ ಅವರ ಸಂಪರ್ಕ ಕಳೆದುಕೊಂಡಿದ್ದರು. ಸುಧಾಕರನ್ ಈಗ ಬಂದಿದ್ದಾದ್ರೂ ಏಕೆ ಎಂಬ ಪ್ರಶ್ನೆ ಕೂಡ ಮೂಡಿದೆ.

17 ವರ್ಷದಿಂದ ಇಲ್ಲದ ಪ್ರೀತಿ ಈಗ ಎಲ್ಲಿಂದ ಉಕ್ಕಿತು?: ಜಯಾ ಪುತ್ರ ಸುಧಾಕರನ್​ ಕಂಡ ಎಲ್ಲರಿಗೂ ಶಾಕ್

ಇದೊಂದು ಆಶ್ಚರ್ಯ ಹುಟ್ಟು ಹಾಕಿದ ಸಂಗತಿ. 1994ರಲ್ಲಿ ಜಯಲಲಿತಾ ಅವರು ತಮ್ಮ ಆಪ್ತೆ ಶಶಿಕಲಾ ಅವರ ಸಂಬಂಧಿ ಸುಧಾಕರನ್ ಅವರನ್ನು ದತ್ತು ಪಡೆದುಕೊಂಡು ಮದುವೆ ಮಾಡಲು ಮುಂದಾಗಿದ್ದರು. ಅದು ಅಂತಿಂಥ ಮದುವೆಯಲ್ಲ. ಆಗಿನ ಕಾಲದಲ್ಲೇ ಬರೋಬ್ಬರಿ 100 ಕೋಟಿ ವೆಚ್ಚ ಮಾಡಿ ಮಾಡಿದ ಮದುವೆ. ಆದರೆ ಸುಧಾಕರನ್ ಅವರನ್ನೇ ಜಯಾ ದತ್ತು ತೆಗೆದುಕೊಳ್ಳುತ್ತಾರೆ ಎಂಬುದು ಕಡೆಯ ಘಳಿಗೆಯವರಿಗೂ ಯಾರಿಗೂ ತಿಳಿದಿರಲಿಲ್ಲ. ಅಷ್ಟೇ ಏಕೆ? ನನ್ನನ್ನೇ ಜಯಲಲಿತಾ ದತ್ತು  ಪಡೆಯುತ್ತಾರೆ ಎಂದು ಖುದ್ದು ಸುಧಾಕರನ್'ಗೂ ಕೂಡ ಗೊತ್ತಿರಲಿಲ್ಲ. ಆದರೆ ಸುಧಾಕರನ್ ಅವರಿಗೆ ತಮಿಳಿನಲ್ಲಿ ಖ್ಯಾತ ನಟ ಶಿವಾಜಿ ಗಣೇಶನ್ ಅವರ ಮೊಮ್ಮಗಳಾದ ಸತ್ಯವತಿ ಜೊತೆ ಮದುವೆ ನಿಶ್ಚಿತವಾದ ಒಡನೆಯೇ ಜಯಲಲಿತಾ ಸುಧಾಕರನ್'ನನ್ನು ದತ್ತು ತೆಗೆದುಕೊಂಡರು. ಜೊತೆಗೆ ಆತನ ಮದುವೆಯನ್ನು ಅದ್ದೂರಿಯಾಗಿ ಮಾಡಿದರು.

ಸುಧಾಕರ್​ ಮದುವೆ ಮಾಡಿದ ನಂತರ, ಆತ ಮಾಡಬಾರದ ತಪ್ಪು ಮಾಡಿ ಎಐಎಡಿಎಂಕೆ ಪಕ್ಷದ ಪ್ರಾಥಮಿಕ ಸದಸ್ಯನ ಸ್ಥಾನದಿಂದಲೇ ಉಚ್ಛಾಟನೆಯಾಗಿ ಹೋಗಿದ್ದ. ಜೊತೆಗೆ ಪೊಲೀಸರು ಆತನನ್ನು ಲಂಚ ಪ್ರಕರಣವೊಂದರಲ್ಲಿ ಬಂಧಿಸಿ ಜೈಲಿಗೂ ಕಳುಹಿಸಿದ್ದರು. ಇಷ್ಟೆಲ್ಲಾ ಆದ ನಂತರ ಸುಧಾಕರನ್, ಜಯಲಲಿತಾ ಅವರ 1996ರ ಚುನಾವಣೆಯಲ್ಲಿ ಅವರ ವಿರುದ್ಧವೇ ಕೆಲಸ ಮಾಡಿ ಸೋಲಿಗೆ ಕಾರಣವಾಗಿದ್ದ. ಜೊತೆಗೆ ಕಳೆದ 17 ವರ್ಷದಿಂದ ಅಮ್ಮನ ಸಂಪರ್ಕವನ್ನೇ ಕಳೆದುಕೊಳ್ಳುವುದರೊಂದಿಗೆ ದೂರವಿದ್ದ. ಆದರೆ ನಿನ್ನೆ ಏಕಾಏಕಿ ಸುಧಾಕರನ್ ಅಮ್ಮನನ್ನು ನೋಡಲು ಚೆನ್ನೈನ ನುಂಗಬಾಕಂನಲ್ಲಿರುವ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದ್ದು ಎಲ್ಲರಿಗೂ ಅಚ್ಚರಿ ತಂದಿದೆ.

ವೈಟ್ ಇನ್ನೋವಾ ಕಾರಿನಲ್ಲಿ ಕುಳಿತಿದ್ದ ಸುಧಾಕರನ್ ಸುಮಾರು ಹೊತ್ತು ಗೇಟಿನ ಮುಂಭಾಗವೇ ಅಮ್ಮನ ದರ್ಶನ ಪಡೆಯಲು ಆಸೆಯಿಂದಿದ್ದ. ಆದರೆ ಸುಧಾಕರನ್ ಬಳಿ ಯಾವುದೇ ಅನುಮತಿಯ ಪತ್ರಯಿಲ್ಲದ ಕಾರಣ ಪೊಲೀಸರು ಆತನನ್ನು ಆಸ್ಪತ್ರೆಯ ಒಳಗೆ ಬಿಡಲಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಸುಧಾಕರನ್ ಹಿಂತಿರುಗಿದ್ದಾರೆ.

ಒಟ್ಟಿನಲ್ಲಿ ಕಳೆದ 17 ವರ್ಷಗಳಿಂದ ಅಮ್ಮನ ಸಂಪರ್ಕದಿಂದ ದೂರ ಉಳಿದಿದ್ದ ಸುಧಾಕರನ್ ನಿನ್ನೆ ಮತ್ತೆ ಪ್ರತ್ಯಕ್ಷವಾಗಿದ್ದು ಕೆಲವರಿಗೆ ಬೇಸರ ತರಿಸಿದ್ರೆ, ಇನ್ನು ಕೆಲವರು ಮತ್ತೆ ಬಂದ ಸುಧಾಕರನ್ ಅಂತಾ ಮನಸ್ಸಿನಲ್ಲಿಯೇ ಮುಂದಿನ ಲೆಕ್ಕಾಚಾರವನ್ನು ಮಾಡಿಕೊಳ್ಳುತ್ತಿದ್ದಾರೆ.

Follow Us:
Download App:
  • android
  • ios