ಮಾಜಿ ಸಚಿವ ಹಾಗೂ ಬಿಜೆಪಿಯ ಮುಖಂಡ ಗಾಲಿ ಜನಾರ್ದನರೆಡ್ಡಿ ಅವರು ಕೇರಳ ರಾಜ್ಯದ ರಾಜಕಾರಣದತ್ತ ದೃಷ್ಟಿಹಾಯಿಸಿದ್ದಾರೆ.
ಬೆಂಗಳೂರು(ಜೂ.29): ಮಾಜಿ ಸಚಿವ ಹಾಗೂ ಬಿಜೆಪಿಯ ಮುಖಂಡ ಗಾಲಿ ಜನಾರ್ದನರೆಡ್ಡಿ ಅವರು ಕೇರಳ ರಾಜ್ಯದ ರಾಜಕಾರಣದತ್ತ ದೃಷ್ಟಿಹಾಯಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಕಮ್ಯುನಿಸ್ಟ್ ಸಿದ್ಧಾಂತದೊಂದಿಗಿನ ಸಂಘರ್ಷದ ಪರಿಣಾಮ ಹತ್ಯೆಯಾಗಿರುವ ಹತ್ತಾರು ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಠಿಹಾಗೂ ಕಾರ್ಯಕರ್ತರ ಕುಟುಂಬಗಳಿಗೆ ಪರಿಹಾರದ ನೆರವು ನೀಡುವ ಬಗ್ಗೆ ರೆಡ್ಡಿ ಗಂಭೀರ ಚಿಂತನೆ ನಡೆಸಿದ್ದು, ಅಂಥವರ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತುಕೊಳ್ಳುವುದೂ ಸೇರಿದಂತೆ ಸಮಗ್ರ ಪರಿಹಾರದ ರೂಪರೇಷೆ ಸಿದ್ಧಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೆಡ್ಡಿ ಅವರು ಧಾರ್ಮಿಕ ವಿಧಿ ವಿಧಾನಗಳಲ್ಲಿ ಹೆಚ್ಚು ನಂಬಿಕೆ ಉಳ್ಳವರು. ಹೀಗಾಗಿಯೇ ದೇವರನಾಡು ಎಂದೇ ಹೆಸರು ಗಳಿಸಿರುವ ಕೇರಳದ ಬಗ್ಗೆ ವಿಶೇಷ ಆಸಕ್ತಿ ಮತ್ತು ಆಸ್ಥೆ ವಹಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗದಿದ್ದರೂ ಹಿಂದಿನಿಂದಲೂ ಕೌಟುಂಬಿಕವಾಗಿ ಹಾಗೂ ರಾಜಕೀಯವಾಗಿ ನಂಟು ಹೊಂದಿರುವ ಆಂಧ್ರಪ್ರದೇಶ ಅಥವಾ ತೆಲಂಗಾಣದ ರಾಜಕಾರಣದಲ್ಲಿ ರೆಡ್ಡಿ ಆಸಕ್ತಿ ತೋರಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದರೆ ಅದು ಅಚ್ಚರಿ ಎನಿಸುತ್ತಿರಲಿಲ್ಲ. ಆದರೆ, ಯಾವುದೇ ರೀತಿಯ ಸಂಬಂಧವಿರದ ಕೇರಳದಲ್ಲಿ ರೆಡ್ಡಿ ಆಸಕ್ತಿ ವಹಿಸಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿದೆ.
ರೆಡ್ಡಿ ಅವರು ಕೇರಳದಲ್ಲಿ ಹತರಾದ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರಿಗೆ ಪರಿಹಾರ ನೀಡಲು ಮುಂದಾಗಿರುವ ಬಗ್ಗೆ ರಾಜ್ಯ ಬಿಜೆಪಿಯ ಇತರ ನಾಯಕರಿಗೆ ಯಾವುದೇ ರೀತಿಯ ಮಾಹಿತಿ ಅಥವಾ ಸುಳಿವು ಇಲ್ಲ. ಈ ಬಗ್ಗೆ ಖುದ್ದು ರೆಡ್ಡಿ ಆಪ್ತರು ಹೇಳುವುದು, ಪಕ್ಷದ ಹೈಕಮಾಂಡ್ ಅದರಲ್ಲೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಇಚ್ಛೆಯ ಮೇರೆಗೆ ಇಂಥದೊಂದು ಮಹತ್ತರ ಕೆಲಸಕ್ಕೆ ಕೈಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಮಲೆಯಾಳಿ ಕಲಿಯುತ್ತಿದ್ದಾರೆ.
ಅದಾದ ನಂತರ ಬೆಂಗಳೂರಿಗೆ ವಾಪಸಾದ ಮೇಲೆ ತಮ್ಮ ಆಪ್ತರೊಂದಿಗೆ ರೆಡ್ಡಿ ಸಮಾಲೋಚನೆ ನಡೆಸಿದ್ದಾರೆ. ನಾನು ಈಗ ಎಲ್ಲವನ್ನೂ ನೋಡಿದ್ದೇನೆ. ಇರುವಷ್ಟುಕಾಲ ಒಳ್ಳೆಯ ಕೆಲಸ ಮಾಡಬೇಕು ಅಷ್ಟೆ. ಕೇರಳದಲ್ಲಿ ಕಮ್ಯುನಿಸ್ಟ್ರಿಂದ ನಮ್ಮ ಪಕ್ಷದ ಹಾಗೂ ಸಂಘ ಪರಿವಾರದ ಅನೇಕ ಮಂದಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ಅವರ ಕುಟುಂಬಗಳ ಸದಸ್ಯರಿಗೆ ಏನಾದರೂ ಸಹಾಯ ಮಾಡಿ ಪ್ರಾಣ ತೊರೆದವರ ಬಲಿದಾನ ವ್ಯರ್ಥವಾಗಿಲ್ಲ ಎಂಬ ಸಂದೇಶ ನೀಡಬೇಕು. ಇದಕ್ಕಾಗಿ ತಾವು ಎಲ್ಲ ರೀತಿಯ ನೆರವು ನೀಡಲು ಸಿದ್ಧ ಎಂಬ ಮಾತನ್ನು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
