ಉಗ್ರರ ದಾಳಿ ವಿಫಲಗೊಳಿಸಿದ್ದ 16ರ ಬಾಲಕಗೆ ಶೌರ್ಯ ಗೌರವ| 2017ರಲ್ಲಿ 3 ಬಂದೂಕುದಾರಿ ಉಗ್ರರನ್ನು ತಡೆದಿದ್ದ ಬಾಲಕ
ನವದೆಹಲಿ[ಮಾ.20]: ಉಗ್ರರ ವಿರುದ್ಧ ಹೋರಾಟ ನಡೆಸುವ ಮೂಲಕ ಸಾಧನೆ ಮಾಡಿದ ಹಲವು ಯೋಧರು, ಹಿರಿಯ ವ್ಯಕ್ತಿಗಳು ಪ್ರತಿ ವರ್ಷ ಶೌರ್ಯ ಪುರಸ್ಕಾರಕ್ಕೆ ಆಯ್ಕೆಯಾಗುವುದು ಸಾಮಾನ್ಯ. ಆದರೆ ಈ ಬಾರಿಯ ವಿಶೇಷವೆಂದರೆ 16 ವರ್ಷದ ಇರ್ಫಾನ್ ಎಂಬ ಬಾಲಕನೊಬ್ಬ ಶೌರ್ಯ ಪುರಸ್ಕಾರ ಪಡೆದುಕೊಂಡಿದ್ದಾನೆ.
2017ರಲ್ಲಿ 3 ಬಂದೂಕುದಾರಿ ಉಗ್ರರು ಇರ್ಫಾನ್ನ ತಂದೆಯನ್ನು ಕೊಲ್ಲಲು ಆಗಮಿಸಿದ್ದರು. ಇರ್ಫಾನ್ ತಂದೆ ಮೊಹಮ್ಮದ್ ರಂಜಾನ್ ಶೇಖ್ ಅವರು ರಾಜಕೀಯ ಕಾರ್ಯಕರ್ತರಾಗಿದ್ದರಿಂದ ಉಗ್ರರು ಆತನ ಕೊಲೆಗೈಯ್ಯಲು ಬಂದಿದ್ದರು. ಈ ಸಂದರ್ಭದಲ್ಲಿ ಇರ್ಫಾನ್, ಮೂವರು ಉಗ್ರರು ಗುಂಡಿನ ದಾಳಿ ಮಾಡುತ್ತಿರುವ ಹೊರತಾಗಿಯೂ, ಉಗ್ರರು ಮನೆಯ ಬಾಗಿಲು ದಾಟಿ ಒಳಗೆ ಬಾರದಂತೆ ತಡೆದಿದ್ದ.
ಆದರೆ, ಉಗ್ರರ ಗುಂಡಿನ ದಾಳಿಯಲ್ಲಿ ಇರ್ಫಾನ್ ತಂದೆ ತೀವ್ರವಾಗಿ ಗಾಯಗೊಂಡಿದ್ದರು. ಅಲ್ಲದೆ, ಈ ಘಟನೆಯಲ್ಲಿ ಓರ್ವ ಉಗ್ರ ಸಹ ಗಾಯಗೊಂಡಿದ್ದ. ಉಗ್ರರ ಮೇಲೆಯೇ ದಾಳಿ ಮಾಡಿದ ಯುವಕನ ಸಾಹಸವು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿತ್ತು.
