ಕೇವಲ ಎರಡು ಕ್ಷೇತ್ರಗಳ ಚುನಾವಣೆ ಗೆಲುವಿನಿಂದ ಸಿದ್ದರಾಮಯ್ಯನವರ ತಲೆ ಮೇಲೆ ಕೋಡು ಮೂಡಿದೆ

ಬೆಂಗಳೂರು(ಮೇ.11): ದುರಂಹಕಾರಿ ಸಿಎಂ ಸಿದ್ದರಾಮಯ್ಯ ಎರಡು ಕ್ಷೇತ್ರಗಳ ಉಪಚುನಾವಣೆ ಗೆದ್ದ ನಂತರ ತಲೆ ಮೇಲೆ ಕೊಂಬು ಮೂಡಿದೆ. ಈ ಗೆಲುವೇ ಕಾಂಗ್ರೆಸ್ ಪಾಲಿಗೆ ಮುಂದಿನ ಚುನಾವಣೆಯಲ್ಲಿ ಸೋಲಿಗೆ ಸೋಪಾನವಾಗಲಿದೆ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್​ ವಾಗ್ದಾಳಿ ನಡೆಸಿದರು.

ನಾಲ್ಕು ವರ್ಷಗಳ ಪೂರೈಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳ ಪಟ್ಟಿಯನ್ನ ಬಿಡುಗಡೆ ಮಾಡಿ ಮಾತನಾಡಿದರು. ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮುನ್ನ ಕೃಷ್ಣಾ ಯೋಜನೆಗಾಗಿ ಪ್ರತಿವರ್ಷ ಹತ್ತು ಸಾವಿರ ಕೋಟಿ ರೂಪಾಯಿ ಖರ್ಚು ಮಾಡುವುದಾಗಿ ಪ್ರಮಾಣ ಮಾಡಿದ್ದರು. ಆದರೆ 5 ಸಾವಿರ ಕೋಟಿ ರೂ.ಗಳನ್ನೂ ಖರ್ಚು ಮಾಡಿಲ್ಲ. ನಾಲ್ಕು ವರ್ಷಗಳಲ್ಲಿ ರಾಜ್ಯ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಹದಗೆಟ್ಟಿದೆ. ಕೇವಲ ಎರಡು ಕ್ಷೇತ್ರಗಳ ಚುನಾವಣೆ ಗೆಲುವಿನಿಂದ ಸಿದ್ದರಾಮಯ್ಯನವರ ತಲೆ ಮೇಲೆ ಕೋಡು ಮೂಡಿದೆ. ಇಡೀ ರಾಷ್ಟ್ರವನ್ನೇ ಗೆದ್ದವರಂತೆ ಸಿಎಂ ಅಹಂಕಾರದಿಂದ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರದ ವೈಫಲ್ಯಗಳ ಕುರಿತ ಪುಸ್ತಕ ಬಿಡುಗಡೆ ಮಾಡುವ ಕಾರ್ಯಕ್ರಮ ಆಯೋಜಿಸಿದ್ದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್​, ಈ ಕಾರ್ಯಕ್ರಮಕ್ಕೆ ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪನವರಿಗೆ ಆಹ್ವಾನ ಕೊಡದೇ ಹೋದುದು ಸಮಾರಂಭದಲ್ಲಿ ಚರ್ಚೆಗೆ ಗ್ರಾಸವಾಗಿತ್ತು.