Asianet Suvarna News Asianet Suvarna News

2016 ರ ಸರ್ಜಿಕಲ್ ಸ್ಟೈಕ್ ಫಲಶೃತಿಯೇನು?

ಬಾಲಾಕೋಟ್‌ನಲ್ಲಿ ಉಗ್ರರು ಮತ್ತೆ ಸಕ್ರಿಯವಾಗಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಟೈಮ್ಸ್‌ ಆಫ್‌ ಇಂಡಿಯಾಗೆ ಸಂದರ್ಶನ ನೀಡಿರುವ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌, ಗಡಿ ದಾಟಬೇಕೆಂದರೆ ನಾವು ದಾಟಿಯೇ ದಾಟುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

Its No longer hide and seek will go across Loc says General Rawat
Author
Bengaluru, First Published Oct 4, 2019, 4:54 PM IST

ಬಾಲಾಕೋಟ್‌ನಲ್ಲಿ ಉಗ್ರರು ಮತ್ತೆ ಸಕ್ರಿಯವಾಗಿದ್ದಾರೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಈ ಹಿನ್ನೆಲೆಯಲ್ಲಿ ಟೈಮ್ಸ್‌ ಆಫ್‌ ಇಂಡಿಯಾಗೆ ಸಂದರ್ಶನ ನೀಡಿರುವ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌, ಗಡಿ ದಾಟಬೇಕೆಂದರೆ ನಾವು ದಾಟಿಯೇ ದಾಟುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಜೈಷ್‌-ಎ-ಮಹಮ್ಮದ್‌ ಉಗ್ರ ಸಂಘಟನೆ ಬಾಲಾಕೋಟ್‌ ಪ್ರದೇಶದಲ್ಲಿ ಮತ್ತೆ ಸಕ್ರಿಯವಾಗಿದೆ. ಗುಪ್ತಚರ ಇಲಾಖೆ ಮಾಹಿತಿ ಪ್ರಕಾರ 250, 300 ಅಥವಾ 500 ಉಗ್ರರು ಭಾರತದ ಒಳಗೆ ನುಸುಳಲು ಪ್ರಯತ್ನಿಸುತ್ತಿದ್ದಾರೆ. ಇದು ನಿಜವೇ ಆಗಿದ್ದರೆ ಕಳೆದ ಫೆಬ್ರವರಿಯಲ್ಲಿ ನಡೆದ ಬಾಲಾಕೋಟ್‌ ಏರ್‌ಸ್ಟೆ್ರೖಕ್‌ನಿಂದ ಏನು ಪ್ರಯೋಜನವಾಯಿತು? ಅಥವಾ 2016ರ ಸೆಪ್ಟೆಂಬರ್‌ನಲ್ಲಿ ನಡೆಸಿದ ಸರ್ಜಿಕಲ್‌ ಸ್ಟೆ್ರೖಕ್‌ನ ಫಲಶ್ರುತಿ ಏನು?

ಮತ್ತೊಂದು ಭಾಗವು ಎಲ್ಲಿಯವರೆಗೆ ಶಾಂತವಾಗಿರುತ್ತದೋ ಅಥವಾ ಎಲ್ಲಿಯವರೆಗೆ ವಾತಾವರಣವನ್ನು ಕೆಡಿಸುವ ಪ್ರಯತ್ನಕ್ಕೆ ಕೈಹಾಕುವುದಿಲ್ಲವೋ ಅಲ್ಲಿಯವರೆಗೆ ಗಡಿ ನಿಯಂತ್ರಣ ರೇಖೆ ಸುರಕ್ಷಿತವಾಗಿರುತ್ತದೆ ಎಂಬ ಸಂದೇಶವನ್ನು ಏರ್‌ ಮತ್ತು ಸರ್ಜಿಕಲ್‌ ಸ್ಟೆ್ರೖಕ್‌ಗಳು ಸಾರುತ್ತವೆ. ಮುಖವಾಡ ಧರಿಸಿ ಪಾಕಿಸ್ತಾನ ಭಯೋತ್ಪಾದಕರನ್ನು ನಿಯಂತ್ರಿಸುತ್ತಿದೆ.

ಆ 58 ರಾಷ್ಟ್ರಗಳ ಹಸರೇಳಿ ಸ್ವಾಮಿ; ಪ್ರಶ್ನೆಗೆ ತಾಳ್ಮೆ ಕಳೆದುಕೊಂಡ ಪಾಕ್ ಅಸಾಮಿ!

ಆದರೆ ಎಷ್ಟುಸಮಯದವರೆಗೆ ಈ ಕಣ್ಣಾಮುಚ್ಚಾಲೆ ಆಡಲು ಸಾಧ್ಯ? ಗಡಿಯನ್ನು ದಾಟಬೇಕೆಂದರೆ ನಾವು ದಾಟಿಯೇ ದಾಟುತ್ತೇವೆ. ಅದು ವಾಯು ಅಥವಾ ಭೂ ಮಾರ್ಗದ ಮೂಲಕವಾಗಿರಬಹುದು ಅಥವಾ ಎರಡೂ ಮಾರ್ಗದ ಮೂಲಕವಾಗಿರಬಹುದು. ನಮ್ಮ ಮುಂದಿನ ದಾರಿ ಏನು ಎಂಬ ಬಗ್ಗೆ ಕೆಂಪು ಪಟ್ಟಿಯು ಸ್ಪಷ್ಟವಾಗಿ ಹೇಳುತ್ತದೆ.

ಪಾಕಿಸ್ತಾನ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಭಾರತ ಈವರೆಗೆ ಸಾಕಷ್ಟುಸಾಕ್ಷ್ಯಾಧಾರಗಳನ್ನು ಒದಗಿಸುತ್ತಿದ್ದರೂ ತಾನು ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿಲ್ಲವೆಂದು ಪಾಕ್‌ ಹೇಳುತ್ತಲೇ ಬರುತ್ತಿದೆ. ಈ ವರ್ಷ ಆಗಸ್ಟ್‌ 5ರ ನಂತರ ಅಂದರೆ ಜಮ್ಮು-ಕಾಶ್ಮೀರಕ್ಕೆ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಬಳಿಕ ಕಾಶ್ಮೀರದಲ್ಲಿ ಜಿಹಾದಿಗಳ ಪರ ಹೋರಾಡೋಣ ಎಂದು ಅವರೇಕೆ ಧ್ವನಿ ಎತ್ತಲಿಲ್ಲ.

ಇದು ಜಮ್ಮು-ಕಾಶ್ಮೀರದಲ್ಲಿನ ಉಗ್ರವಾದಕ್ಕೆ ಪಾಕ್‌ ನೀಡುತ್ತಿರುವ ಮೌನ ಸಮ್ಮತಿ. ಈ ರೀತಿಯ ಭಯೋತ್ಪಾದಕತೆಯನ್ನು ರಾತ್ರೋರಾತ್ರಿ ಸೃಷ್ಟಿಸಲು ಸಾಧ್ಯವಿಲ್ಲ. ಇದು ಅದರ ಹುಟ್ಟು ಗುಣ. ಪಾಕಿಸ್ತಾನದಲ್ಲಿ ಉಗ್ರರ ತರಬೇತಿ ಕೇಂದ್ರಗಳಿವೆ. ಈ ಮೂಲಕ ಅವರು ಭಯೋತ್ಪಾದಕರನ್ನು ಸಾಕುತ್ತಿದ್ದಾರೆ. ಅವರ ಬೆನ್ನ ಹಿಂದೆ ನಿಂತು ಭಾರತದ ಮೇಲೆ ಯುದ್ಧ ಮಾಡಿಸುವುದು ಪಾಕಿಸ್ತಾನದ ರಾಜ್ಯ ನೀತಿ.

ಪಾಕಿಸ್ತಾನ ಆಗಾಗ ಪರಮಾಣು ಬಾಂಬ್‌ ಪ್ರಯೋಗಿಸುವ ಬೆದರಿಕೆ ಹಾಕುತ್ತಿದೆ. ಪ್ರಧಾನಿ ಇಮ್ರಾನ್‌ ಖಾನ್‌ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಯುಎನ್‌ಜಿಎ) ನ್ಯೂಕ್ಲಿಯರ್‌ ದಳ್ಳುರಿಯ ಬಗ್ಗೆ ಮಾತನಾಡಿದ್ದಾರೆ. ಅವರು ಭಾರತದ ಮೇಲೆ ಅಣುಬಾಂಬ್‌ ಪ್ರಯೋಗಿಸಲು ಸಾಧ್ಯವೇ?

ಪರಮಾಣು ಶಸ್ತ್ರಾಸ್ತ್ರಗಳು ಯುದ್ಧವನ್ನು ತಡೆಯುವ ಅಸ್ತ್ರಗಳು. ಅದು ಯುದ್ಧಕ್ಕೆ ಬಳಸುವ ಶಸ್ತ್ರಾಸ್ತ್ರವಲ್ಲ. ಯಾರೋ ಒಬ್ಬರು ಯುದ್ಧದ ಸಂದರ್ಭದಲ್ಲಿ ಅಥವಾ ದಾಳಿ ಸಂದರ್ಭದಲ್ಲಿ ಎದುರಾಳಿಗಳ ಮೇಲೆ ನ್ಯೂಕ್ಲಿಯರ್‌ ಬಾಂಬ್‌ ದಾಳಿ ಮಾಡುತ್ತೇನೆಂದು ಘೋಷಿಸಿದಾಗ ಅದನ್ನು ಗ್ರಹಿಸುವುದೇ ನನಗೆ ಕಷ್ಟವಾಗುತ್ತದೆ. ಜಾಗತಿಕ ಸಮುದಾಯ ನ್ಯೂಕ್ಲಿಯರ್‌ ಬಾಂಬ್‌ಗಳನ್ನು ಹೀಗೆ ಬೇಕೆಂದಾಗ ಬಳಸುವುದನ್ನು ಒಪ್ಪುತ್ತದೆಯೇ? ಶಸ್ತ್ರಾಸ್ತ್ರಗಳ ಬಳಕೆ ಹೇಗೆಂಬುದನ್ನೇ ಪಾಕಿಸ್ತಾನ ತಪ್ಪಾಗಿ ಅರ್ಥೈಸಿಕೊಂಡಿದೆ.

9 ವರ್ಷಗಳಲ್ಲೇ ವಿಶಿಷ್ಟ ನಿರ್ಧಾರ; ನಿಮ್ಮ ಜೇಬು ಉಳಿತಾಯಕ್ಕೆ ಆರ್ ಬಿಐ ಆಧಾರ!

ಗಡಿನಿಯಂತ್ರಣ ರೇಖೆ ಬಳಿ ಈಗ ಸನ್ನಿವೇಶ ಹೇಗಿದೆ?

ಆಗಸ್ಟ್‌ 5ರ ನಂತರ ಉಗ್ರರ ಒಳನುಸುಳುವಿಕೆ ಪ್ರಯತ್ನ ಹೆಚ್ಚುತ್ತಿದೆ. ಕಣಿವೆಯಲ್ಲಿ ನುಸುಳಲು ನಿರರ್ಥಕ ಪ್ರಯತ್ನಗಳು ನಡೆಯುತ್ತಿವೆ. ಯುವ ಜನರನ್ನು ಪ್ರಚೋದಿಸಿ ಗಲಭೆ ಸೃಷ್ಟಿಸಲು ಪಾಕ್‌ ಕುಮ್ಮಕ್ಕು ನೀಡುತ್ತಿದೆ. ಆದರೆ ನಾವು ಭರವಸೆ ನೀಡುತ್ತೇವೆ - ಪಾಕ್‌ ಪ್ರಚೋದಿತ ಭಯೋತ್ಪಾದಕರು ಭಾರತದ ಗಡಿ ದಾಟಲಾರರು. ನುಸುಳುಕೋರರಿಂದ ಕಾಶ್ಮೀರವನ್ನು ರಕ್ಷಿಸಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು ನಮ್ಮ ಗುರಿ.

ಕಾಶ್ಮೀರದಲ್ಲಿ ವಿಧಿಸಲಾಗಿರುವ ಎಲ್ಲಾ ನಿರ್ಬಂಧಗಳನ್ನು ಸಡಿಲಿಸಿ ಎಂದಿನಂತೆ ಸಂವಹನ ಆರಂಭವಾದ ಬಳಿಕ ಮತ್ತೆ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗಬಹುದೇ?

ಕಾಶ್ಮೀರದಲ್ಲಿ ಆಗಿದ್ದೆಲ್ಲಾ ಒಳ್ಳೆಯದೇ ಎಂದು ಬಹುಪಾಲು ಜನರು ಅರಿತುಕೊಂಡಿದ್ದಾರೆ. ಇನ್ನೊಂದು ವರ್ಗದವರು ಕಾಶ್ಮೀರಿಗಳ ಹಕ್ಕುಗಳನ್ನು ಕಸಿಯಲಾಗುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಜನರು ಇದನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಕೇಂದ್ರ ಸರ್ಕಾರದ ಕ್ರಮದ ಹಿಂದಿನ ಸಾಧಕ-ಬಾಧಕಗಳನ್ನು ಅರಿತುಕೊಳ್ಳಬಹುದು. ಮತ್ತು ಕಳೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಪಡೆದುಕೊಳ್ಳುತ್ತಿದ್ದೇವೆ ಎಂಬುದು ಅವರಿಗೆ ಅರಿವಾಗಬಹುದು. ಕಾಶ್ಮೀರದಲ್ಲಿರುವವರೆಲ್ಲಾ ಈಗಲೂ ಕಾಶ್ಮೀರಿಗಳೇ, ಜಮ್ಮು-ಕಾಶ್ಮೀರದ ನಿವಾಸಿಗಳೇ. ಅವರೆಲ್ಲ ಭಾರತದ ಇತರ ಪ್ರದೇಶಗಳಿಗೆ ಹೋಗಿ ನೆಲೆಸಬಹುದು, ಕಾಶ್ಮೀರದಲ್ಲಿ ಏನು ಉದ್ಯೋಗ ಮಾಡುತ್ತಿದ್ದರೋ ಅದನ್ನೇ ಬೇರೆಡೆಯಲ್ಲೂ ಮಾಡಬಹುದು.

ಭಾರತದ ವಿವಿಧ ಭಾಗಗಳಲ್ಲಿ ಕಾಶ್ಮೀರದ ವಿದ್ಯಾರ್ಥಿಗಳು ಬಂದು ವಿದ್ಯಾಭ್ಯಾಸ ಪಡೆಯಬಹುದು. ಅವರಿಗೆ ಭಾರತದ ಬೇರೆಲ್ಲಾ ಪ್ರಜೆಗಳಂತೆಯೇ ಸ್ವಾತಂತ್ರ್ಯವಿದೆ. ಆದರೆ ಭಾರತದ ಇತರ ಭಾಗಗಳ ಜನರಿಗೇಕೆ ಕಾಶ್ಮೀರದಲ್ಲಿ ಈ ಸ್ವಾತಂತ್ರ್ಯವಿರಲಿಲ್ಲ? ಕಾಶ್ಮೀರ ಕೇವಲ ಕಣಿವೆ ಮಾತ್ರವಲ್ಲ. ಕಣಿವೆಯಿಂದಾಚೆಯೂ ಜನರಿದ್ದಾರೆ. ಇದು ಭಾರತದ ಒಂದು ಚಿಕ್ಕ ಭಾಗ. ರಾಜ್ಯದ ಯಾವುದೋ ಒಂದು ಭಾಗದ ಜನರು ನಲುಗುತ್ತಿದ್ದಾರೆ. ಅಲ್ಲಿನ ವಾತಾವರಣ ಕೆಟ್ಟದಾಗಿದೆ ಎಂದು ಜನರು ಹೇಳುತ್ತಿದ್ದಾರೆ. ಹಾಗಾದರೆ 30 ವರ್ಷ ಅಲ್ಲಿನ ವಾತಾವರಣ ಚೆನ್ನಾಗಿತ್ತು ಎಂದರ್ಥವೇ?

ನನ್ನ ಪ್ರಕಾರ ಕಾಶ್ಮೀರದಲ್ಲಿ ಕಳೆದ 30 ವರ್ಷ ಅತ್ಯಂತ ಕೆಟ್ಟದಾಗಿತ್ತು ಮತ್ತು ಕಳೆದೆರಡು ತಿಂಗಳು ಉತ್ತಮ ಹಾಗೂ ಶಾಂತಿಯುತವಾಗಿತ್ತು. ನಾವು ಕಾಶ್ಮೀರದಲ್ಲಿ ‘ಕ್ಲಾಂಪ್‌ಡೌನ್‌’ ಮಾಡಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಹಾಗಂದರೆ ಏನು? ಯಾವ ವಿದ್ಯಾರ್ಥಿಯನ್ನಾದರೂ ಶಾಲೆಯಿಂದ ಬಹಿಷ್ಕರಿಸಲಾಗಿದೆಯೇ? ಶಾಲೆಯನ್ನು ಮುಚ್ಚಲಾಗಿದೆಯೇ? ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದೆಯೇ? ಜನರು ಹೊರಬಂದು, ಅವರರವರ ತೋಟಗಳಲ್ಲಿ ಕೆಲಸ ಮಾಡಬಹುದು ಎಂದು ನಾವು ಹೇಳುತ್ತಲೇ ಇದ್ದೇವೆ.

ಆದರೆ ವರದಿಗಳ ಪ್ರಕಾರ ಜಮ್ಮು ಕಾಶ್ಮೀರದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಸೆರೆಮನೆಯಲ್ಲಿಡಲಾಗಿತ್ತು.

ಬೆಂಕಿ ಹಚ್ಚುವುದು, ಕಲ್ಲೆಸೆಯುವುದು, ಸೇಬು ಬೆಳೆಗಾರರನ್ನು ಬೆದರಿಸುವ ಪೋಸ್ಟರ್‌ ಅಂಟಿಸುವುದು ಮಾಡಿ ಸೆಕ್ಷನ್‌ 144 ಉಲ್ಲಂಘಿಸಿದವರನ್ನು ಬಂಧನದಲ್ಲಿಡಲಾಗುತ್ತದೆ. ಇದೂ ಅದೇ ರೀತಿ. ಅವರು ಸೇಬು ಬೆಳೆಗಾರರಲ್ಲಿ ಆತಂಕ ಹುಟ್ಟಿಸಿ ವಾತಾವರಣವನ್ನು ಹಾಳು ಮಾಡಲು ಯತ್ನಿಸಿ ಶಾಂತಿ ಕದಡಿದವರು. ವಾಸ್ತವವಾಗಿ ಭದ್ರತಾ ಸಿಬ್ಬಂದಿಗಳು ಕೇವಲ ಗುಂಪು ಗುಂಪಾಗಿ ಹೊರಬರಬೇಡಿ ಎಂದು ಎಚ್ಚರಿಕೆ ನೀಡುತ್ತಾರೆ. ಲೂಟಿ ಮತ್ತು ಹಿಂಸಾಚಾರದ ಸಂದರ್ಭದಲ್ಲಿ ಜನರನ್ನು ರಕ್ಷಿಸುತ್ತಾರೆ. ಇಂಥ ಸಂದರ್ಭದಲ್ಲಿ ಬಂಧನಕ್ಕೊಳಗಾದವರನ್ನು ಪೊಲೀಸರು ಪರಿಶೀಲಿಸಿದ ಬಳಿಕ ಬಿಡುಗಡೆ ಮಾಡುತ್ತಾರೆ.

-  ಬಿಪಿನ್‌ ರಾವತ್‌ ಸೇನಾ ಮುಖ್ಯಸ್ಥ

Follow Us:
Download App:
  • android
  • ios