ಜಯನಗರ ಚುನಾವಣಾ ಫಲಿತಾಂಶ ಪ್ರಕಟ ಠೇವಣಿ ಕಳೆದುಕೊಂಡ ಸಾಮಾಜಿಕ ಕಾರ್ಯಕರ್ತ ರವಿ ಕೃಷ್ಣಾ ರೆಡ್ಡಿ ಸೋಲನೊಪ್ಪಿಕೊಂಡಿದ್ದೇನೆ; ಇದು ನಮ್ಮ ಸಮಯವಲ್ಲ: ಪ್ರತಿಕ್ರಿಯೆ

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಜಯನಗರ ಚುನಾವಣಾ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ 2889 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್ ಅಭ್ಯರ್ಥಿ, ರಾಮಲಿಂಗ ರಡ್ಡಿ ಪುತ್ರಿ ಸೌಮ್ಯಾ ರೆಡ್ಡಿ 54457 ಮತ ಗಳಿಸಿದರೆ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು 51568 ಮತ ಗಳಿಸಿದ್ದಾರೆ.

ಆದರೆ ತನ್ನ ಭ್ರಷ್ಟಾಚಾರ ವಿರೋಧಿ ಹೋರಾಟ, ಸರಳ ಮತ್ತು ಪಾರದರ್ಶಕ ರಾಜಕಾರಣದ ಮೂಲಕ ನಿರೀಕ್ಷೆ ಮೂಡಿಸಿದ್ದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾ ರೆಡ್ಡಿ ಠೇವಣಿ ಕಳೆದುಕೊಂಡಿದ್ದಾರೆ. ಕೇವಲ 1861 ಮತಗಳನ್ನು ಪಡೆಯುವ ಮೂಲಕ ಭಾರೀ ನಿರಾಸೆ ಮೂಡಿಸಿದ್ದಾರೆ.

ಫಲಿತಾಂಶಕ್ಕೆ ಪ್ರತಿಕ್ರಿಯಿಸಿರುವ ರವಿಕೃಷ್ಣಾ ರೆಡ್ಡಿ, ಬೆಂಬಲಿಗರ, ಅಭಿಮಾನಿಗಳ ಕ್ಷಮೆಯನ್ನು ಕೋರಿದ್ದಾರೆ. ನನ್ನಿಂದ ಜೀವನದ ಬಹುದೊಡ್ಡ ಪ್ರಮಾದವಾಗಿದೆ, ಇದು ನಮ್ಮ ಸಮಯವಲ್ಲ ಎಂದು ರೆಡ್ಡಿ ಹೇಳಿದ್ದಾರೆ.

ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ರವಿ ಕೃಷ್ಣಾ ರೆಡ್ಡಿ, ಲೋಕಸತ್ತಾ ಪಕ್ಷ, ಬಳಿಕ ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯದಲ್ಲಿ ಸಕ್ರೀಯರಾಗಿದ್ದವರು. ಆಮ್ ಆದ್ಮಿ ಪಕ್ಷ ಬಿಟ್ಟ ಬಳಿಕ ಲಂಚಮುಕ್ತ ಕರ್ನಾಟಕ ವೇದಿಕೆಯನ್ನು ರೂಪಿಸುವ ಮೂಲಕ ಭ್ರಷ್ಟಾಚಾರದ ವಿರುದ್ಧ ಚಳುವಳಿ ನಡೆಸುತ್ತಿದ್ದಾರೆ.