ಹಾಸ್ಟೆಲ್ ನೆಪದಲ್ಲಿ ಮೇಲ್ವರ್ಗದತ್ತ ‘ಕೈ’ಚಾಚಿದ ಪರಂ!
ಜಾತಿ ಆಧಾರಿತ ಹಾಸ್ಟೆಲ್ ಬೇಡ ಎಂದ ಪರಂ! ಈಗ ಜ್ಞಾನೋದಯಾ ಆಯ್ತಾ ಕಾಂಗ್ರೆಸ್ಗೆ?! ಉನ್ನತ ವರ್ಗದವರನ್ನ ಯುವಕರ ಸೆಳೆಯಲು ತಂತ್ರ! ಮೇಲ್ವರ್ಗದವರ ಮನಸೆಳೆಯಲು ಮುಂದಾದ ಕಾಂಗ್ರೆಸ್! ಈ ಟ್ವೀಟ್ ಹಿಂದೆ ಇದೆ ರಾಜಕೀಯ ಲೆಕ್ಕಾಚಾರ
ಬೆಂಗಳೂರು(ಆ.2): ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೇ ಉನ್ನತ ವರ್ಗದ ಯುವಕರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆಯಾ ಎಂಬ ಅನುಮಾನ ಕಾಡತೊಡಗಿದೆ. ಜಾತಿವಾರು ಹಾಸ್ಟೆಲ್ ಗಳನ್ನು ವಿರೋಧಿಸಿ ಡಿಸಿಎಂ ಡಾ.ಜಿ. ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.
ಜಾತಿವಾರು ಹಾಸ್ಟೆಲ್ ಬದಲು ಸಾಮಾನ್ಯ ವಸತಿಗೃಹಗಳನ್ನು ನಿರ್ಮಿಸಿ ಎಲ್ಲಾ ವಿಧ್ಯಾರ್ಥಿಗಳು ಒಟ್ಟಿಗೆ ಇರುವಂತೆ ನೋಡಿಕೊಳ್ಳಬೇಕು ಎಂದು ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ. ಇದು ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಿಂದ ಪೆಟ್ಟುತಿಂದ ಬಳಿಕ, ಜಾತಿ ವಿಚಾರವಾಗಿ ಕೈ ಪಾಳೆಯ ಎಚ್ಚೆತ್ತುಕೊಳ್ಳುತ್ತಿರುವ ಸಂಕೇತ ಎಂದು ಹೇಳಲಾಗುತ್ತಿದೆ.
ಮಕ್ಕಳಿಗೆ ಹಾಸ್ಟೆಲ್ ಕಟ್ಟುವಾಗ ಜಾತಿ ಮೇಲೆ ವಿಂಗಡಿಸಿ ನಾವೇ ಮಕ್ಕಳಲ್ಲಿ ಜಾತಿಯ ವಿಷಬೀಜವನ್ನು ಬಿತ್ತುತ್ತಿದ್ದೇವೆ. ಸಾಮಾನ್ಯ ವಸತಿ ಗೃಹಗಳನ್ನು ಕಟ್ಟಿ ಎಲ್ಲ ವಿದ್ಯಾರ್ಥಿಗಳೂ ಒಟ್ಟಿಗೆ ಇರುವಂತೆ ಮಾಡಬೇಕು. ಮಕ್ಕಳ ಮನಸ್ಸಲ್ಲಿ ಎಲ್ಲರೂ ಸಮಾನರು ಎಂಬ ಭಾವನೆಯನ್ನು ಬೆಳೆಸಿ ಜಾತೀಯತೆಯನ್ನು ಮುಂದಿನ ಪೀಳಿಗೆಯ ಮನಸ್ಸಿನಿಂದಲೇ ತೊಲಗಿಸಬೇಕು. pic.twitter.com/4qBFBYnBPA
— Dr. G Parameshwara (@DrParameshwara) July 31, 2018
ಅಹಿಂದ ವರ್ಗಕ್ಕೆ ತಮ್ಮ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಿದ್ದ ಕಾಂಗ್ರೆಸ್, ಇದೀಗ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮೇಲ್ವರ್ಗದ ಯುವಕರನ್ನು ಸೆಳೆಯಲು ತಂತ್ರ ಹೂಡಿದೆ ಎನ್ನಲಾಗಿದೆ. ಇದೇ ವಿಚಾರವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದು, ಜಾತಿ, ಧರ್ಮಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ರಾಜದ್ರೋಹದ ಕೆಲಸ ಎಂದು ಹೇಳಿದ್ದಾರೆ.
ಆದರೆ ಈ ಹಿಂದೆ ಉನ್ನತ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಡಿಸಿಎಂ ಪರಮೇಶ್ವರ್, ಆಗ ಏಕೆ ಈ ಕುರಿತು ಪ್ರಸ್ತಾಪ ಮಾಡಲಿಲ್ಲ ಎಂದು ಕೆಲಚರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತಿ ಆಧಾರದ ಮೇಲೆ ಹಾಸ್ಟೆಲ್ ನಿರ್ಮಾಣ ಬೇಡ ಎಂಬುದು ಪರಮೇಶ್ವರ್ ಅಂಬೋಣ. ಆದರೆ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಜ್ಞಾನೋದಯವಾದುದರ ಕುರಿತು ಕಾಂಗ್ರೆಸ್ ಪಕ್ಷವೇ ಉತ್ತರಿಸಬೇಕು.