ಶರತ್ ಸಾವನ್ನು ಮುಚ್ಚಿಟ್ಟು ಕಾಂಗ್ರೆಸ್ ಸಮಾವೇಶ ನಡೆಸಿದರಾ ಮುಖ್ಯಮಂತ್ರಿಗಳು? ಪುಷ್ಟಿ ನೀಡುವಂತಿದೆ ಆಸ್ಪತ್ರೆ ವರದಿ
ಆರ್'ಎಸ್’ಎಸ್ ಕಾರ್ಯಕರ್ತ ಶರತ್ ಸಾವನ್ನು ಮುಚ್ಚಿಟ್ಟು ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿ ಸಮಾವೇಶ ನಡೆಸಿದರಾ? ಇಂಥದ್ದೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಮಂಗಳೂರು (ಜು.13): ಆರ್'ಎಸ್’ಎಸ್ ಕಾರ್ಯಕರ್ತ ಶರತ್ ಸಾವನ್ನು ಮುಚ್ಚಿಟ್ಟು ಸಿಎಂ ಸಿದ್ದರಾಮಯ್ಯ ಮಂಗಳೂರಿನಲ್ಲಿ ಸಮಾವೇಶ ನಡೆಸಿದರಾ? ಇಂಥದ್ದೊಂದು ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಜುಲೈ 4 ನೇ ತಾರೀಖು ರಾತ್ರಿ ಶರತ್ ಮೇಲೆ ಹಲ್ಲೆಯಾಗುತ್ತದೆ. 2 ದಿನಗಳ ಕಾಲ ವೈದ್ಯರು ಅವರನ್ನು ಉಳಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ದುರಾದೃಷ್ಟವಶಾತ್ 6 ನೇ ತಾರೀಖು ರಾತ್ರಿ 12.30 ಕ್ಕೆ ಶರತ್ ವಿಧಿವಶರಾಗುತ್ತಾರೆ. ಈ ವಿಚಾರವನ್ನು ಆಸ್ಪತ್ರೆ ಸಿಬ್ಬಂದಿ ಶರತ್ ಮನೆಯವರಿಗಾಗಲಿ, ತಂದೆ-ತಾಯಿಗಾಗಲಿ ತಿಳಿಸುವುದಿಲ್ಲ. ಜು. 7 ನೇ ತಾರೀಖು ಜಿಲ್ಲೆಯಲ್ಲಿ ಕಾಂಗ್ರೆಸ್ ಸಮಾವೇಶ ಇದ್ದ ಕಾರಣ ಸಿಎಂ ಸಿದ್ದರಾಮಯ್ಯ ಆಗಮನದ ಹಿನ್ನಲೆಯಲ್ಲಿ ಸಾವಿನ ಸುದ್ದಿಯನ್ನು ಮುಚ್ಚಿಟ್ಟು ಸಮಾವೇಶ ನಡೆಸಲಾಗಿದೆ. ಸಿದ್ದರಾಮಯ್ಯನವರು ಸಮಾವೇಶ ಮುಗಿಸಿ ವಿಮಾನ ಹತ್ತಿ ಹೊರಟು ಹೋದ ಮೇಲೆ 7 ನೇ ತಾರೀಖಿನ ರಾತ್ರಿ 8.30 ರ ಸುಮಾರಿಗೆ ಸಾವಿನ ವಿಚಾರವನ್ನು ಬಹಿರಂಗಪಡಿಸಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆಯ ವರದಿ ಹರಿದಾಡುತ್ತಿದ್ದು ಇದಕ್ಕೆ ಪುಷ್ಟಿ ನೀಡುವಂತಿದೆ.
ಮಗನ ಸಾವಿನ ವಿಚಾರ ತಿಳಿಯದ ಅವರ ತಾಯಿ ದೇವಸ್ಥಾನಗಳಿಗೆ ಹೋಗಿ ಮಗ ಬದುಕಲೆಂದು ಪೂಜೆ-ಪುನಸ್ಕಾರ, ಹರಕೆಯನ್ನು ಹೊರುತ್ತಾರೆ. ಮಗನ ಅಂಗಾಂಗಗಳನ್ನು ದಾನ ಮಾಡಬೇಕೆಂದು ತಂದೆ-ತಾಯಿಗಳಿಗೆ ಆಸೆಯಿತ್ತು. ಆದರೆ ಹೆಚ್ಚು ಕಡಿಮೆ ಒಂದು ದಿನ ತಡವಾಗಿ ಸಾವಿನ ವಿಚಾರ ತಿಳಿಸಿದ್ದರಿಂದ ಅದಕ್ಕೂ ಅವಕಾಶ ಸಿಗದಂತಾಯಿತು. ಸಿಎಂ ಸಿದ್ದರಾಮಯ್ಯನವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.