ಐ ಫೋನ್ ಗಿಫ್ಟ್ : ಬಿಗ್ ಟ್ವಿಸ್ಟ್ ಪಡೆದ ವಿವಾದ
ರಾಜ್ಯ ಸಂಸದರಿಗೆ ದುಬಾರಿ ಮೌಲ್ಯದ ಆ್ಯಪಲ್ ಐ ಫೋನ್ ಗಿಫ್ಟ್ ವಿವಾದವು ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ.
ಬೆಂಗಳೂರು: ರಾಜ್ಯ ಸಂಸದರಿಗೆ ದುಬಾರಿ ಮೌಲ್ಯದ ಆ್ಯಪಲ್ ಐ ಫೋನ್ ಗಿಫ್ಟ್ ವಿವಾದವು ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. ಐ ಫೋನನ್ನು ‘ನನ್ನ ಸ್ವಂತ ಹಣದಿಂದ ಕೊಟ್ಟಿದ್ದೇನೆ’ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ ಹೇಳಿಕೊಂಡಿದ್ದರು. ಇದರ ನಡುವೆಯೇ ಕಾವೇರಿ ನೀರಾವರಿ ನಿಗಮದ ವತಿಯಿಂದ ತಲಾ 1 ಲಕ್ಷ ರು. ಮೌಲ್ಯದ ಆ್ಯಪಲ್ ಐ ಫೋನ್ ಹಾಗೂ ಲೆದರ್ ಬ್ಯಾಗ್
ಗಿಫ್ಟ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ದೆಹಲಿಯಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕುರಿತು ನಡೆದ ಸಂಸದರ ಸಭೆಯಲ್ಲಿ ಸಂಸದರಿಗೂ ತಲಾ ೧ ಲಕ್ಷ ರು. ಮೌಲ್ಯದ ೬೪ ಜಿಬಿ ಸಾಮರ್ಥ್ಯದ ಐ-ಫೋನ್ ಟೆನ್ ಉಡುಗೊರೆಯಾಗಿ ನೀಡಲಾಗಿದ್ದು, ಈ ಉಡುಗೊರೆಯನ್ನು ತಲುಪಿಸಿದ್ದು ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ವೊಬ್ಬರು ಎನ್ನಲಾಗಿದೆ. ಹೀಗಾಗಿ ನೀರಾವರಿ ನಿಗಮದ ಮೇಲೆ ಅನುಮಾನ ಹುಟ್ಟಲು ಕಾರಣವಾಗಿದೆ. ಇದು ತೀವ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ‘ರಾಜ್ಯ ಸರ್ಕಾರದಿಂದ ಈ ಉಡುಗೊರೆ ಕೊಟ್ಟಿಲ್ಲ. ಇದು ನನ್ನ ಗಮನಕ್ಕೂ ಬಂದಿಲ್ಲ’ ಎಂದಿದ್ದರು. ಬೆನ್ನಲ್ಲೇ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ‘ನನ್ನ ಸ್ವಂತ ಹಣದಿಂದ ಫೋನ್ ಉಡುಗೊರೆ ನೀಡಲಾಗಿದೆ’ ಎಂದು ಸಮರ್ಥನೆ ನೀಡಿದ್ದರು.
ಇತರ ಜಲನಿಗಮದ ಮೇಲೂ ಗುಮಾನಿ: ಮತ್ತೊಂದು ಮೂಲದ ಪ್ರಕಾರ ಐ-ಫೋನ್ನ್ನು ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಬರುವ ಕಾವೇರಿ ನೀರಾವರಿ ನಿಗಮ, ಕೃಷ್ಣಾ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ವಿಶ್ವೇಶ್ವರಯ್ಯ ಜಲ ನಿಗಮಗಳ ವತಿಯಿಂದ ವಿತರಣೆ ಮಾಡಲಾಗಿದೆ ಎಂಬ ಆರೋಪಿಸಲಾಗುತ್ತಿದ್ದು, ಈ ಆರೋಪಕ್ಕೆ ಪೂರಕವಾಗಿ ಕಾವೇರಿ ನಿಗಮದ ಸದಸ್ಯರು ಹಾಗೂ ನಿಗಮದ ಇಂಜಿನಿ ಯರ್ಗಳು ಸಂಸದರಿಗೆ ಐ-ಫೋನ್ ಹಂಚಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ‘ಕಾವೇರಿ ನೀರಾವರಿ ನಿಗಮದ ಎಂಜಿನಿಯರ್ ಒಬ್ಬರು ನಮ್ಮ ಮನೆಗೆ ಬಂದು ಕಾವೇರಿ ನದಿಗೆ ಸಂಬಂಧಪಟ್ಟ ದಾಖಲೆಗಳಿವೆ ಎಂದು ಹೇಳಿ ಬ್ಯಾಗ್ನ್ನು ನೀಡಿದರು. ಅದರಲ್ಲಿ ಫೋನ್ ಕೂಡ ಇದೆ ಎಂದು ಹೇಳಿದ್ದರು’ ಎಂದು ಸಂಸದರೊಬ್ಬರು ತಿಳಿಸಿದ್ದಾರೆ.