Asianet Suvarna News Asianet Suvarna News

ನಮ್ಮ ಅಂತರಿಕ್ಷ ಸರ್ಜಿಕಲ್ ಸ್ಟ್ರೈಕ್ ನಿಂದ ಬಾಹ್ಯಾಕಾಶ ಕೇಂದ್ರಕ್ಕೆ ಅಪಾಯವಂತೆ!

ಅಂತರಿಕ್ಷದಲ್ಲಿ ಕ್ಷಿಪಣಿಯ ಮೂಲಕ ಉಪಗ್ರಹವನ್ನು ಹೊಡೆದುರುಳಿಸುವ ಪರೀಕ್ಷೆಯನ್ನು ಭಾರತ ನಡೆಸಿದ್ದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹಾಗೂ ಭವಿಷ್ಯದ ಮಾನವಸಹಿತ ಗಗನಯಾನಕ್ಕೆ ಅಪಾಯ ಎದುರಾಗಿದೆ ಎಂದು ಹೇಳಿದೆ. 

Indias ASAT test created debris raised risk for International Space Station
Author
Bengaluru, First Published Apr 3, 2019, 8:11 AM IST

ವಾಷಿಂಗ್ಟನ್‌:  ಅಂತರಿಕ್ಷದಲ್ಲಿ ಕ್ಷಿಪಣಿಯ ಮೂಲಕ ಉಪಗ್ರಹವನ್ನು ಹೊಡೆದುರುಳಿಸುವ ಪರೀಕ್ಷೆಯನ್ನು ಭಾರತ ನಡೆಸಿದ್ದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಹಾಗೂ ಭವಿಷ್ಯದ ಮಾನವಸಹಿತ ಗಗನಯಾನಕ್ಕೆ ಅಪಾಯ ಎದುರಾಗಿದೆ ಎಂದು ಹೇಳಿದೆ. ಅಮೆರಿಕದ ನಾಸಾ ಆಡಳಿತಾಧಿಕಾರಿ ಜಿಮ್‌ ಬ್ರೈಡನ್‌ಸ್ಟೀನ್‌ ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಆದರೆ ನಾಸಾ ಈ ಹೇಳಿಕೆಯನ್ನು ಭಾರತೀಯ ವಿಜ್ಞಾನಿಗಳು ಕಟುವಾಗಿ ಟೀಕಿಸಿದ್ದಾರೆ. ಇದೊಂದು ಊಹಾತ್ಮಕ ಹೇಳಿಕೆ. ಭಾರತದ ಪ್ರಗತಿಯನ್ನು ಅಮೆರಿಕನ್ನರು ನೋಡುವ ದೃಷ್ಟಿಹೀಗೆಯೇ ಇರುತ್ತದೆ. ಈಗಾಗಲೇ ಬಾಹ್ಯಾಕಾಶದಲ್ಲಿ ಲಕ್ಷ ಲಕ್ಷ ಅವಶೇಷಗಳು ಸುತ್ತಾಡುತ್ತಿವೆ. ಅವುಗಳಿಂದ ಬಾಹ್ಯಾಕಾಶ ಕೇಂದ್ರಕ್ಕೆ ಯಾವುದೇ ಹಾನಿ ಆಗದೇ ಎಂದು ಡಿಆರ್‌ಡಿಒದ ಮಾಜಿ ಮುಖ್ಯಸ್ಥ ವಿ.ಕೆ.ಸಾರಸ್ವತ್‌ ಪ್ರಶ್ನಿಸಿದ್ದಾರೆ.

ಭಯಾನಕ:  ಭಾರತ ನಡೆಸಿದ ಉಪಗ್ರಹ ನಾಶ ಪ್ರಯೋಗವು ಭಯಾನಕವಾದುದು ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಪ್ರತಿಕ್ರಿಯೆ ನೀಡಿದೆ. ಭಾರತವು ಉಪಗ್ರಹವನ್ನು ಹೊಡೆದಿದ್ದರಿಂದ ಸುಮಾರು 400 ಅವಶೇಷದ ತುಣುಕುಗಳು ಅಂತರಿಕ್ಷದಲ್ಲಿ ಸೃಷ್ಟಿಯಾಗಿವೆ. ಅವುಗಳಲ್ಲಿ 10 ಸೆಂ.ಮೀ.ಗಿಂತ ದೊಡ್ಡ ತುಣುಕುಗಳನ್ನು ನಾಸಾ ಪತ್ತೆಹಚ್ಚಿದ್ದು, ಅಂತಹ ಸುಮಾರು 60 ತುಣುಕುಗಳು ನಮ್ಮ ಲೆಕ್ಕಕ್ಕೆ ಸಿಕ್ಕಿವೆ. ಅವುಗಳಲ್ಲಿ 24 ತುಣುಕುಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕಿಂತ ಮೇಲೆ ಹೋಗಿವೆ. ಅವು ಅಲ್ಲೇ ಅತ್ತಿತ್ತ ಸುತ್ತುತ್ತಿದ್ದು, ಯಾವಾಗ ಬೇಕಾದರೂ ಬಾಹ್ಯಾಕಾಶ ಕೇಂದ್ರಕ್ಕೆ ಡಿಕ್ಕಿ ಹೊಡೆಯಬಹುದು ಮತ್ತು ಭವಿಷ್ಯದಲ್ಲಿ ಮಾನವಸಹಿತ ಗಗನಯಾನ ಕೈಗೊಂಡರೆ ಈ ತುಣುಕುಗಳು ನೌಕೆಗೆ ಡಿಕ್ಕಿ ಹೊಡೆಯಬಹುದು. ಭಾರತ ಈ ಪ್ರಯೋಗ ನಡೆಸಿದ್ದರಿಂದ ಬಾಹ್ಯಾಕಾಶ ಕೇಂದ್ರಕ್ಕೆ ಅಂತರಿಕ್ಷದಲ್ಲಿರುವ ಅವಶೇಷಗಳು ಡಿಕ್ಕಿ ಹೊಡೆಯುವ ಸಾಧ್ಯತೆ ಶೇ.44ರಷ್ಟುಹೆಚ್ಚಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತ ಕಳೆದ ಮಾ.27ರಂದು ಅಂತರಿಕ್ಷದಲ್ಲಿ ಹಾರಾಡುವ ಉಪಗ್ರಹವನ್ನು ಕ್ಷಿಪಣಿಯ ಮೂಲಕ ಹೊಡೆದುರುಳಿಸುವ ತಂತ್ರಜ್ಞಾನದ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತ್ತು. ತನ್ಮೂಲಕ ಜಗತ್ತಿನಲ್ಲಿ ಅಮೆರಿಕ, ರಷ್ಯಾ ಹಾಗೂ ಚೀನಾದ ನಂತರ ಈ ತಂತ್ರಜ್ಞಾನವನ್ನು ಹೊಂದಿದ ನಾಲ್ಕನೇ ದೇಶವಾಗಿ ಹೊರಹೊಮ್ಮಿತ್ತು. ತಾನು ಹೊಡೆದುರುಳಿಸಿದ ಉಪಗ್ರಹದ ಅವಶೇಷಗಳು ಕೆಳ ಅಂತರಿಕ್ಷದಲ್ಲಿ ಹಾರಾಡುತ್ತಿದ್ದು, ಒಂದು ವಾರದಲ್ಲಿ ಭೂಮಿಗೆ ಉರಿದು ಬೀಳುತ್ತವೆ. ಅವುಗಳಿಂದ ಯಾವುದೇ ತೊಂದರೆಯಿಲ್ಲ ಎಂದು ಭಾರತ ಹೇಳಿತ್ತು. ಆಗ ಈ ಪರೀಕ್ಷೆಯನ್ನು ರಾಡಾರ್‌ಗಳ ಮೂಲಕ ಗಮನಿಸಿದ್ದಾಗಿ ಹೇಳಿಕೊಂಡಿದ್ದ ಅಮೆರಿಕ ಇದೀಗ ಆಕ್ಷೇಪ ವ್ಯಕ್ತಪಡಿಸಿದೆ.

ನಾಸಾ ಹೇಳೋದೇನು?

- ಭಾರತವು ಉಪಗ್ರಹ ಹೊಡೆದದ್ದರಿಂದ ಅಂತರಿಕ್ಷದಲ್ಲಿ 400 ಅವಶೇಷಗಳ ತುಣುಕು ಸೃಷ್ಟಿ

- 10 ಸೆಂ.ಮೀ.ಗಿಂತ ದೊಡ್ಡ 60 ತುಣುಕು ಪತ್ತೆ. ಈ ಪೈಕಿ 24 ಬಾಹ್ಯಾಕಾಶ ಕೇಂದ್ರದಿಂದಾಚೆಗೆ

- ಇಂತಹ ತುಣುಕುಗಳು ಅಲ್ಲೇ ಸುತ್ತುತ್ತಿದ್ದು, ಬಾಹ್ಯಾಕಾಶ ಕೇಂದ್ರಕ್ಕೆ ಡಿಕ್ಕಿ ಹೊಡೆವ ಸಾಧ್ಯತೆ

- ಅಲ್ಲದೆ, ಭವಿಷ್ಯದಲ್ಲಿ ಮಾನವಸಹಿತ ಗಗನಯಾನ ಕೈಗೊಂಡರೆ ನೌಕೆಗೆ ಈ ಅವಶೇಷ ಡಿಕ್ಕಿ ಸಂಭವ

ಲಕ್ಷಗಟ್ಟಲೆ ಅವಶೇಷ ಇಲ್ವೇ?

ಇದೊಂದು ಊಹಾತ್ಮಕ ಹೇಳಿಕೆ. ಭಾರತದ ಪ್ರಗತಿಯನ್ನು ಅಮೆರಿಕನ್ನರು ನೋಡುವ ದೃಷ್ಟಿಹೀಗೆಯೇ ಇರುತ್ತದೆ. ಈಗಾಗಲೇ ಬಾಹ್ಯಾಕಾಶದಲ್ಲಿ ಲಕ್ಷ ಲಕ್ಷ ಅವಶೇಷಗಳು ಸುತ್ತಾಡುತ್ತಿವೆ. ಅವುಗಳಿಂದ ಬಾಹ್ಯಾಕಾಶ ಕೇಂದ್ರಕ್ಕೆ ಯಾವುದೇ ಹಾನಿ ಆಗದೇ?

- ವಿ.ಕೆ.ಸಾರಸ್ವತ್‌, ಡಿಆರ್‌ಡಿಒದ ಮಾಜಿ ಮುಖ್ಯಸ್ಥ

Follow Us:
Download App:
  • android
  • ios