ಟೀಮ್ ಇಂಡಿಯಾದ ಟ್ರೈನರ್ ರಾಜೇಶ್ ಸಾವಂತ್ ಅನುಮಾನಾಸ್ಪದ ಸಾವು
ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಭಾರತದ ಅಂಡರ್-19 ತಂಡದ ಆಟಗಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಳ್ಳುವ ಸಾಧ್ಯತೆ ಇದೆ.
ಮುಂಬೈ(ಜ. 29): ಭಾರತದ ಅಂಡರ್-19 ಕ್ರಿಕೆಟ್ ತಂಡದ ಟ್ರೈನರ್ ರಾಜೇಶ್ ಸಾವಂತ್ ತಮ್ಮ ಹೋಟೆಲ್ ರೂಮ್'ನಲ್ಲಿ ಭಾನುವಾರ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಏನು ಕಾರಣ ಎಂಬುದು ಇನ್ನೂ ಗೊತ್ತಾಗಿಲ್ಲ. ನಾಳೆ ಪ್ರಾರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಗೆ ಮುನ್ನ ಟೀಮ್ ಇಂಡಿಯಾ ಜೂನಿಯರ್ಸ್'ಗೆ ಶಾಕಿಂಗ್ ಸುದ್ದಿ ಇದಾಗಿದೆ. ರಾಜೇಶ್ ಸಾವಂತ್ ಇಂದು ಟ್ರೈನಿಂಗ್ ಸೆಷೆನ್'ಗೆ ಹಾಜರಾಗಬೇಕಿತ್ತು. ಆದರೆ, ಅವರು ಬರದೇ ಇದ್ದುದ್ದರಿಂದ ಜನರು ಹುಡುಕಾಟ ನಡೆಸಿದ್ದಾರೆ. ಆಗ ಹೋಟೆಲ್ ರೂಮ್'ನಲ್ಲಿ ಅವರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಯಾರು ಈ ಸಾವಂತ್?
ಅತ್ಯುತ್ತಮ ಟ್ರೈನರ್ ಎನಿಸಿದ್ದ ರಾಜೇಶ್ ಸಾವಂತ್ ಸಾಕಷ್ಟು ಅನುಭವ ಹೊಂದಿದವರಾಗಿದ್ದರು. ಆಫ್ಘಾನಿಸ್ತಾನ ರಾಷ್ಟ್ರೀಯ ತಂಡಕ್ಕೂ ಅವರು ಟ್ರೈನರ್ ಆಗಿ ದುಡಿದಿದ್ದಾರೆ. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲೂ ಕೆಲಸ ಮಾಡಿರುವ ಅವರು ಎಂಎಸ್ ಧೋನಿ, ಯುವರಾಜ್ ಸಿಂಗ್ ಅವರಿಗೆ ಫಿಟ್ನೆಸ್ ಟ್ರೈನಿಂಗ್ ಕೊಟ್ಟಿದ್ದರು. ಅಂಡರ್-19 ತಂಡದ ಆಟಗಾರರ ದೈಹಿಕ ಕ್ಷಮತೆಯನ್ನು ಹೆಚ್ಚಿಸಲು ರಾಜೇಶ್ ಸಾವಂತ್ ಸಾಕಷ್ಟು ಬೆವರು ಹರಿಸಿದ್ದರು.
ರಾಜೇಶ್ ಅವರ ಅಕಾಲಿಕ ಮರಣದಿಂದ ಭಾರತದ ಕಿರಿಯರ ತಂಡ ಶಾಕ್ ಆಗಿದೆ. ನಾಳೆ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ವೇಳೆ ಭಾರತದ ಅಂಡರ್-19 ತಂಡದ ಆಟಗಾರರು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಳ್ಳುವ ಸಾಧ್ಯತೆ ಇದೆ.