ಗಾಂಧೀಜಿ ತತ್ವ ಸಿದ್ಧಾಂತ ಬಿಜೆಪಿಗೆ ಎಂದೂ ಅರ್ಥವಾಗಲ್ಲ: ಸೋನಿಯಾ| ತಾವು ಶ್ರೇಷ್ಠರೆಂದುಕೊಂಡವರಿಗೆ ಗಾಂಧಿ ಸಿದ್ಧಾಂತ ಅರ್ಥವಾಗಲ್ಲ| ಗಾಂಧೀಜಿ ಹಾದಿಯಲ್ಲಿ ನಡೆದಿದ್ದು ಕಾಂಗ್ರೆಸ್‌ ಮಾತ್ರ| ರಾಜಘಾಟ್‌ನಲ್ಲಿ ಸೋನಿಯಾ ಬಿಜೆಪಿ ವಿರುದ್ಧ ವಾಗ್ದಾಳಿ

ನವದೆಹಲಿ[ಅ.03]: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯ 150ನೇ ಜಯಂತಿ ಪ್ರಯುಕ್ತ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಹಲವು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬೆನ್ನಲ್ಲೇ, ತಮ್ಮನ್ನು ತಾವು ಸರ್ವಶ್ರೇಷ್ಠರು ಎಂಬುದಾಗಿ ಭಾವಿಸಿಕೊಂಡು ಸುಳ್ಳಿನ ರಾಜಕೀಯದಲ್ಲಿ ಮಗ್ನರಾಗಿರುವ ಬಿಜೆಪಿಗೆ ಗಾಂಧೀಜಿ ಅವರ ತತ್ವ ಸಿದ್ಧಾಂತಗಳು ಹಾಗೂ ಬಲಿದಾನಗಳು ಎಂದಿಗೂ ಅರ್ಥವಾಗುವುದೇ ಇಲ್ಲ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಾತ್ಮ ಗಾಂಧೀಜಿ ಅವರ ಸಮಾಧಿ ಇರುವ ರಾಜ್‌ಘಾಟ್‌ನಲ್ಲಿ ಬುಧವಾರ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸೋನಿಯಾ, ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕಂಡು ಮಹಾತ್ಮ ಗಾಂಧೀಜಿ ಅವರ ಆತ್ಮ ಯಾತನೆ ಅನುಭವಿಸುತ್ತಿದೆ ಎಂದು ಬಿಜೆಪಿ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದರು.

ತಮ್ಮನ್ನು ತಾವು ಸರ್ವಶ್ರೇಷ್ಠರು ಎಂದು ಭಾವಿಸಿಕೊಂಡವರು, ಮಹಾತ್ಮ ಗಾಂಧೀಜಿ ಅವರ ಬಲಿದಾನಗಳನ್ನು ಅರ್ಥೈಸಿಕೊಳ್ಳುವುದು ಹೇಗೆ ಸಾಧ್ಯ? ಸುಳ್ಳಿನ ರಾಜಕೀಯದಲ್ಲಿ ತೊಡಗಿರುವವರಿಗೆ ಗಾಂಧೀಜಿಯ ಅಹಿಂಸಾ ಸಿದ್ಧಾಂತಗಳು ಅರಿವಿಗೆ ಬರುವುದಿಲ್ಲ. ಬೇರೆಯವರು ಏನು ಬೇಕಾದರೂ ಅಂದುಕೊಳ್ಳಲಿ, ಆದರೆ, ಕಾಂಗ್ರೆಸ್‌ ಮಾತ್ರವೇ ಗಾಂಧೀಜಿ ಅವರ ಹಾದಿಯಲ್ಲಿ ನಡೆಯುತ್ತಿದೆ. ನಾವು ಉದ್ಯೋಗ, ಶಿಕ್ಷಣ ಹಾಗೂ ರೈತರ ಪರ ನಿಲ್ಲುವ ಮೂಲಕ ಗಾಂಧಿ ಕನಸುಗಳನ್ನು ನನಸು ಮಾಡುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಗಾಂಧಿ ಕಾರಣದಿಂದಾಗಿಯೇ ಭಾರತ ಈ ಪ್ರಮಾಣದ ಅಭಿವೃದ್ಧಿ ಸಾಧಿಸಿದ್ದು, ಭಾರತ ಎಂದರೆ ಗಾಂಧಿಯೇ ಆಗಿದ್ದಾರೆ. ಆದರೆ, ಕೆಲವರು ಭಾರತವನ್ನು ಆರ್‌ಎಸ್‌ಎಸ್‌ ಮಾಡಲು ಹೊರಟಿದ್ದಾರೆ ಎಂದು ಬಿಜೆಪಿ ವಿರುದ್ಧ ಸೋನಿಯಾ ಕಿಡಿಕಿಡಿಯಾದರು.