ಮಾಜಿ ಸಚಿವರಿಬ್ಬರಿಗೆ ಎದುರಾಗಿದೆ ಸಂಕಷ್ಟ
ರಾಜ್ಯದ ಇಬ್ಬರು ಮಾಜಿ ಸಚಿವರಿಗೆ ಸಂಕಷ್ಟ ಎದುರಾಗಿದೆ. ಪ್ರಕರಣ ಒಂದರ ಸಂಬಂಧ ಇಬ್ಬರ ವಿಚಾರಣೆ ನಡೆಯಲಿದೆ.
ಬೆಂಗಳೂರು [ಜು.31]: ಇನ್ನು ಐಎಂಎ ವಂಚನೆ ಪ್ರಕರಣದಲ್ಲಿ ಶಾಸಕರಾದ ರೋಷನ್ ಬೇಗ್ ಮತ್ತು ಜಮೀರ್ ಅಹಮ್ಮದ್ ಖಾನ್ ಅವರು ಬುಧವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
ಜು.31ರಂದು ಸ್ಪೀಕರ್ ಅವರ ಚುನಾವಣೆ ಇರುವುದರಿಂದ ಇಬ್ಬರು ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಆದರೆ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಇಬ್ಬರು ಶಾಸಕರು ಎಸ್ಐಟಿಯನ್ನು ಕೇಳಿಲ್ಲ. ಒಂದೊಮ್ಮೆ ಪತ್ರದ ಮೂಲಕ ವಿಚಾರಣೆಗೆ ಮತ್ತೊಂದು ದಿನ ಕಾಲವಕಾಶ ಕೇಳಿದರೆ, ಅವಕಾಶ ನೀಡಲಾಗುವುದು ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ.
ಮೊದಲು ಇಬ್ಬರು ಶಾಸಕರಿಗೆ ಜು.29ರಂದು ವಿಚಾರಣೆಗೆ ಹಾಜರಾಗುವಂತೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಜು.29ರಂದೇ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ಇಬ್ಬರು ಶಾಸಕರಿಗೆ ಜು.31ರಂದು ಹಾಜರಾಗುವಂತೆ ಎಸ್ಐಟಿ ಮತ್ತೊಂದು ನೋಟಿಸ್ ನೀಡಿತ್ತು.