ಎಚ್’ಡಿ ದೇವೇಗೌಡರು ತೇರು ಎಳೆಯುವಾಗ ತಪ್ಪಿತೊಂದು ಭಾರಿ ಅವಘಡ
ಹಾಸನ ಜಿಲ್ಲೆ ಹೊಳೆನರಸೀಪುರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ರಥೋತ್ಸವದ ವೇಳೆ ಭಾರಿ ಅವಘಡವೊಂದು ತಪ್ಪಿದೆ.
ಹಾಸನ : ಹಾಸನ ಜಿಲ್ಲೆ ಹೊಳೆನರಸೀಪುರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ರಥೋತ್ಸವದ ವೇಳೆ ಭಾರಿ ಅವಘಡವೊಂದು ತಪ್ಪಿದೆ. ಮಾಜಿ ಪ್ರಧಾನಿ ಎಚ್’ಡಿ ದೇವೇಗೌಡ ಹಾಗೂ ಚನ್ನಮ್ಮ ದಂಪತಿ ಸಂಕಷ್ಟವೊಂದರಲ್ಲಿ ಪಾರಾಗಿದ್ದಾರೆ. ತೇರನ್ನು ಎಳೆದು ಪಕ್ಕಕ್ಕೆ ಹೋಗುವ ವೇಳೆ ನೂಕು ನುಗ್ಗಲು ಉಂಟಾಗಿದ್ದರಿಂದ ತೇರಿನ ಮುಂಭಾಗವಿದ್ದ ಎಚ್’ಡಿಡಿ ದಂಪತಿ ಬಳಿ ತೇರು ಬರಲಾರಂಭೀಸಿತು.
ಸಾವಿರಾರು ಜನರು ರಥೋತ್ಸವಕ್ಕೆ ಆಗಮಿಸಿದ್ದರಿಂದ ಗೊಂದಲ ಉಂಟಾಗಿ ತೇರು ಮುಂದೆ ಚಲಿಸುವ ವೇಳೆ ಜನರು ಕಕ್ಕಾಬಿಕ್ಕಿಯಾಗಿ ಓಡತೊಡಗಿದರು. ಈ ವೇಳೆ ಸ್ವತಃ ರೇವಣ್ಣ ತಂದೆ – ತಾಯಿ ರಕ್ಷಣೆಗೆ ಧಾವಿಸಿ, ಚನ್ನಮ್ಮ ಮತ್ತು ದೇವೇಗೌಡರನ್ನು ಪಕ್ಕಕ್ಕೆ ಸರಿಸಿದರು. ಈ ಘಟನೆಯು ಎಲ್ಲರನ್ನೂ ಕೂಡ ಕ್ಷಣಕಾಲ ದಂಗಾಗಿಸಿತು.
ಇಂದು ಹಾಸನದ ಹೊಳೇನರಸೀಪುರದಲ್ಲಿ ನಡೆದ ರಥೋತ್ಸವಕ್ಕೆ ಎಚ್’ಡಿಡಿ ದಂಪತಿ ಕುಟುಂಬ ಸಮೇತರಾಗಿ ಆಗಮಿಸಿದ್ದರು. ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಎಚ್’ಡಿಡಿ ಭಯ ಪಡುವಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.