ನೆಚ್ಚಿನ ನಾಯಕನನ್ನು ಕಳೆದುಕೊಂಡ ಎಲ್ಲರ ಮೊಗದಲ್ಲೂ ದುಗುಡ, ಸಂಕಟ ಮಡುಗಟ್ಟಿತ್ತು. ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಹಾಲಹಳ್ಳಿಗೆ ಜನಸಾಗರವೇ ಹರಿದುಬಂದಿತ್ತು.
ಮೈಸೂರು(ಜ.04): ತೀವ್ರ ಹೃದಯಾಘಾತದಿಂದ ನಿನ್ನೆ ನಿಧನರಾದ ಸಹಕಾರ ಸಚಿವ ಹೆಚ್.ಎಸ್. ಮಹದೇವ್ ಪ್ರಸಾದ್ ಅವರ ಅಂತ್ಯ ಸಂಸ್ಕಾರ ಇಂದು ಅವರ ಹುಟ್ಟೂರಾದ ಹಲನಹಳ್ಳಿಯಲ್ಲಿ ನೆರವೇರಿತು. ಸಕಲ ಸರ್ಕಾರಿ ಗೌರವವನ್ನು ಸಲ್ಲಿಸುವುದರೊಂದಿಗೆ ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಿತು.
ನೆಚ್ಚಿನ ನಾಯಕನನ್ನು ಕಳೆದುಕೊಂಡ ಎಲ್ಲರ ಮೊಗದಲ್ಲೂ ದುಗುಡ, ಸಂಕಟ ಮಡುಗಟ್ಟಿತ್ತು. ಅಗಲಿದ ನಾಯಕನ ಅಂತಿಮ ದರ್ಶನಕ್ಕೆ ಹಾಲಹಳ್ಳಿಗೆ ಜನಸಾಗರವೇ ಹರಿದುಬಂದಿತ್ತು. ಸಾವಿರಾರು ಮಂದಿ ಪಾರ್ಥೀವ ಶರೀರದ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ , ಸಚಿವ ಸಂಪುಟದ ಸಹೋದ್ಯೋಗಿಗಳು, ವಿವಿಧ ಮಠದ ಸ್ವಾಮೀಜಿಗಳು ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನ ಪಡೆದರು.ಅಜಾತಶತ್ರುವಿನ ಶ್ರದ್ಧಾಂಜಲಿ ವೇಳೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ದಂಡೇ ನೆರೆದಿತ್ತು. ತಮ್ಮ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡು ಸಿಎಂ ಅವರ ಮುಖದಲ್ಲಿ ಬೇಸರ ಹಾಗೂ ದುಖಃ ಮಡುಗಟ್ಟಿತ್ತು.
ಸಚಿವರ ತೋಟದಲ್ಲಿ ಅಂತ್ಯಸಂಸ್ಕಾರ
ಮಧ್ಯಾಹ್ನ 2.30ರ ವರೆಗೆ ಸಾರ್ವಜನಿಕ ದರ್ಶನವಾದ ನಂತರ ಪಾರ್ಥೀವ ಶರೀರವನ್ನು ಮಹದೇವ್ ಪ್ರಸಾದ್ ಅವರ ತೋಟಕ್ಕೆ ತರಲಾಯಿತು. ಸಮಾಧಿ ಬಳಿ ರಾಷ್ಟ್ರಗೀತೆ ಹಾಡಿ, ಮೂರು ಸುತ್ತು ಗುಂಡು ಹಾರಿಸಿ ನಂತರ ಒಂದು ನಿಮಿಷಗಳ ಕಾಲ ಮೌನಾಚರಣೆ ಆಚರಿಸಲಾಯಿತು. ನಂತರ ಮಾದಾಪಟ್ಟಣದ ವಿರಕ್ತ ಮಠದ ಸದಾಶಿವ ಸ್ವಾಮಿಗಳ ಮಾರ್ಗದರ್ಶನದಲ್ಲಿ ವೀರಶೈವ ಸಂಪ್ರದಾಯದಂತೆ ಪೂಜೆಗಳು ನಡೆದವು.
ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಅಂತ್ಯ ಸಂಸ್ಕಾರಕ್ಕಾಗಿ ಸುತ್ತೂರು ಸ್ವಾಮಿಗಳ ಪಾದದಂತೆ 5 ಪಾದ ಅಗಲ, 10 ಉದ್ದ ಹಾಗೂ 9 ಪಾದ ಆಳದ ಗುಂಡಿ ತೆಗೆಯಲಾಗಿತ್ತು. ಅದರಲ್ಲಿ ಪ್ರಸಾದ್ ಅವರ ಪಾರ್ಥೀವ ಶರೀರವನ್ನು ಇರಿಸಿ ನಂತರ ಅವರ ತಲೆ ಮೇಲೆ ಸದಾಶಿವ ಸ್ವಾಮಿಗಳ ಪಾದವನ್ನು ಇರಿಸಿ ಕಳಶ ಪೂಜೆ, ಗುರುಪಾದ, ಅಭಿಷೇಕ ಇತ್ಯಾದಿ ಕಾರ್ಯವಿಧಾನಗಳನ್ನು ನೆರವೇರಿಸಲಾಯಿತು. ಅಂತಿಮವಾಗಿ ಮಹದೇವ್ ಪ್ರಸಾದ್ ತಮ್ಮದೇ ಕರ್ಮ ಭೂಮಿಯಲ್ಲಿ ತಂದೆ ತಾಯಿ ಇಬ್ಬರ ಸಮಾಧಿ ಬಳಿ ಮಣ್ಣಾದರು. ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಂಟಿತನದ ನೋವನ್ನು ಪ್ರಸಾದ್ ಕೊಟ್ಟು ಹೋಗಿದ್ದಾರೆ.
ವರದಿ: ಶಶಿಧರ್ ಕೆ.ವಿ., ಸುವರ್ಣನ್ಯೂಸ್, ಮೈಸೂರು
