ಕಪ್ಪು ಹಣದ ಕೋಟೆ ಬೇಧಿಸಲು 6 ತಿಂಗಳ ಗೂಢ ಕಾರ್ಯಾಚರಣೆ
ನೋಟುಗಳ ಮೇಲಿನ ಕ್ರಮವನ್ನು ಈ ಹಿಂದೆಯೇ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಆದರೆ ದಸರಾ, ದೀಪಾವಳಿಯಂಥ ಸರಣಿ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಸರ್ಕಾರ ತನ್ನ ನಿರ್ಧಾರವನ್ನು ಮುಂದೂಡಿತ್ತು.
ನವದೆಹಲಿ(ನ.10): ರಾಷ್ಟ್ರದಲ್ಲಿನ ಕಪ್ಪು ಹಣ ನಿಯಂತ್ರಣಕ್ಕಾಗಿ 500 ಮತ್ತು 1,000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಲು ಕಳೆದ ಮಾರ್ಚ್ ತಿಂಗಳಿಂದಲೇ ಮೋದಿ ಕಾರ್ಯತಂತ್ರ ರೂಪಿಸಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಆದರೆ, ಈ ಕುರಿತಾದ ಮಾಹಿತಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಆರ್ಬಿಐ ಗವರ್ನರ್ ಆಗಿದ್ದ ರಘುರಾಮ್ ರಾಜನ್ ಮತ್ತು ಉಪ ಗವರ್ನರ್ ಆರ್.ಗಾಂ ಅವರಿಗೆ ಮಾತ್ರ ಇತ್ತು.
ಆರ್ಬಿಐ ಗವರ್ನರ್ ಸ್ಥಾನಕ್ಕೆ ನೇಮಕವಾದ ಬಳಿಕವಷ್ಟೇ ಊರ್ಜಿತ್ ಪಟೇಲ್ ಈ ಬಗ್ಗೆ ಅರಿತುಕೊಂಡಿದ್ದರು ಎಂದು ‘ದಿ ಎಕಾನಾಮಿಕ್ ಟೈಮ್ಸ್’ ವರದಿ ಮಾಡಿದೆ. ಒಂದು ವೇಳೆ ಈ ವಿಚಾರ ಸೋರಿಕೆಯಾಗಿದ್ದರೆ, ಕಾಳಧನಿಕರು ತಮ್ಮಲ್ಲಿರುವ ಕಪ್ಪುಹಣವನ್ನು ಹವಾಲ ದಂಧೆ, ಚಿನ್ನ, ರಿಯಲ್ ಎಸ್ಟೇಟ್ನಂಥ ಉದ್ದಿಮೆಗಳಲ್ಲಿ ತೊಡಗಿಸುವ ಭೀತಿಯಿತ್ತು ಎಂದು ಹೂಡಿಕೆ ನಿರ್ವಹಣಾ ಸಂಸ್ಥೆಯ ಪರಸ್ ಸಾವ್ಲಾ ಅಬಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ಇರುವ ನೋಟುಗಳನ್ನು ವಾಪಸ್ ಪಡೆದು ನೂತನ ನೋಟುಗಳ ಚಲಾವಣೆ ಜಾರಿಗೆ ತರಲು ಮೊದಲು 3.5 ಬಿಲಿಯನ್ ಮೊತ್ತದ ನೋಟುಗಳನ್ನು ಪ್ರಿಂಟ್ ಮಾಡಬೇಕೆಂದು ನಿರ್ಧರಿಸಲಾಯಿತು. ಇಷ್ಟು ಮೊತ್ತದ ನೋಟುಗಳ ಮುದ್ರಣಕ್ಕಾಗಿ ನ.30ರವರೆಗೂ ಸಮಯಾವಕಾಶ ಬೇಕಾಗುತ್ತದೆ ಎಂದು ಊಹಿಸಲಾಗಿತ್ತು.
ನೋಟುಗಳ ಮೇಲಿನ ಕ್ರಮವನ್ನು ಈ ಹಿಂದೆಯೇ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿತ್ತು. ಆದರೆ ದಸರಾ, ದೀಪಾವಳಿಯಂಥ ಸರಣಿ ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕಾಗಿ ಸರ್ಕಾರ ತನ್ನ ನಿರ್ಧಾರವನ್ನು ಮುಂದೂಡಿತ್ತು. ಅಲ್ಲದೆ, ಮುಂದಿನ ಸಂಸತ್ ಕಲಾಪದೊಳಗೆ ಮತ್ತು ಉತ್ತರಪ್ರದೇಶ ಸೇರಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಹೇರುವ ಮೊದಲೇ ಈ ಕ್ರಮ ಕೈಗೊಳ್ಳಬೇಕಿತ್ತು. ಹಾಗಾಗಿ, ಪ್ರಸ್ತುತ ಸಂದರ್ಭ ಕಪ್ಪು ಹಣ ನಿಯಂತ್ರಣಕ್ಕಾಗಿ ನೋಟುಗಳ ರದ್ದು ಕ್ರಮಕ್ಕೆ ಇದೇ ಸುಸಂದರ್ಭ ಎಂದು ಮೋದಿ ಅಭಿಪ್ರಾಯಪಟ್ಟಿದ್ದರು. ಇದು ಮುಂದಿನ ಬಜೆಟ್ ಸಿದ್ಧತೆಗೂ ಅನುಕೂಲವಾಗಲಿದೆ ಎಂಬುದು ಕೇಂದ್ರದ ಪ್ರತಿಪಾದನೆ.