ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಮದ್ದೂರು ತಾಲೂಕಿನ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜನ 100ಕ್ಕೂ ಅಧಿಕ ಹಿಂಬಾಲಕರನ್ನು ವಿಚಾರಣೆ ನಡೆಸಿ ಎಸ್ಐಟಿ ಹೇಳಿಕೆ ದಾಖಲಿಸಿಕೊಂಡಿದೆ.
ಬೆಂಗಳೂರು : ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಮದ್ದೂರು ತಾಲೂಕಿನ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆಮಂಜನ 100ಕ್ಕೂ ಅಧಿಕ ಹಿಂಬಾಲಕರನ್ನು ವಿಚಾರಣೆ ನಡೆಸಿ ಎಸ್ಐಟಿ ಹೇಳಿಕೆ ದಾಖಲಿಸಿಕೊಂಡಿದೆ.
ಮದ್ದೂರು ತಾಲೂಕಿನಲ್ಲಿ ಹಿಂದೂ ಪರ ಸಂಘಟನೆಯಲ್ಲಿ ಸಕ್ರಿಯವಾಗಿದ್ದ ನವೀನ್ ಜತೆ ಹಲವು ಯವಕರು ಕೈ ಜೋಡಿಸಿದ್ದರು. ಈಗ ಕೊಲೆ ಪ್ರಕರಣ ಕುರಿತು ಆತನ ಸಂಪರ್ಕದಲ್ಲಿದ್ದ ಕೆಲವರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದಿದ್ದೇವೆ. ಆದರೆ ಮಹತ್ವದ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಗೌರಿ ಲಂಕೇಶ್ ಹತ್ಯೆಯಲ್ಲಿ ನವೀನ್ ಪಾತ್ರ ಖಚಿತವಾಗುತ್ತಿಲ್ಲ. ಆದರೆ ತಮ್ಮ ವಿಚಾರಧಾರೆಗೆ ವಿರೋಧ ನಿಲುವು ತಾಳಿರುವ ಮೈಸೂರಿನ ಪ್ರಗತಿ ಪರ ಚಿಂತಕ ಎಸ್.ಕೆ.ಭಗವಾನ್ ಅವರ ಹತ್ಯೆಗೆ ನವೀನ್ ತಂಡ ಸಂಚು ರೂಪಿಸಿತ್ತು ಎಂಬ ಆರೋಪವು ಬಲಗೊಳ್ಳುತ್ತಿದೆ. ಇದಕ್ಕೆ ತನಿಖೆ ನಡೆದಂತೆ ಪೂರಕ ಸಾಕ್ಷ್ಯಗಳು ಲಭ್ಯವಾಗುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭಗವಾನ್ ಅವರ ಮನೆ ಬಳಿ ನವೀನ್ ಸುತ್ತಾಡಿರುವ ಕುರಿತು ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಆದರೆ ಗೌರಿ ಲಂಕೇಶ್ ಅವರ ಹತ್ಯೆಗೂ ಮುನ್ನ ಅವರ ಮನೆ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಶಂಕಿತ ಹಂತಕನಿಗೂ ನವೀನ್ ಮುಖ ಚಹರೆಗೂ ಹೊಂದಾಣಿಕೆಯಾಗುತ್ತಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

Last Updated 11, Apr 2018, 1:01 PM IST