ಯಡಿಯೂರಪ್ಪ ಅಳಿಯನಿಗೂ ಪ್ರಮೋಷನ್ ಕೊಟ್ಟಿದ್ದೇವೆ : ರೇವಣ್ಣ
ಯಡಿಯೂರಪ್ಪ ಅವರ ಅಳಿಯ ನನ್ನ ಇಲಾಖೆಯಲ್ಲೇ ಎಂಜಿನಿಯರ್ ಆಗಿದ್ದಾರೆ. ಅವರಿಗೂ ಪ್ರಮೋಷನ್ ಕೊಟ್ಟಿದ್ದೇವೆ. ಯಡಿಯೂರಪ್ಪ ಎಷ್ಟು ಸೂಟ್ಕೇಸ್ ಕೊಟ್ರು ಅಂತ ಅವರು ಹೇಳಲಿ ಎಂದು ಎಚ್.ಡಿ ರೇವಣ್ಣ ಟಾಂಗ್ ನೀಡಿದರು.
ಬಳ್ಳಾರಿ: ಮಾಜಿ ಸಚಿವ ಬಿ.ಶ್ರೀರಾಮುಲು ಅವರನ್ನು ಬಿಜೆಪಿಯವರು ಮುಖ್ಯಮಂತ್ರಿ ಮಾಡುವುದಿಲ್ಲ. ಬಿಜೆಪಿಯವರು ಮಾತನಾಡೋದು ಹೆಚ್ಚು. ಕೆಲಸ ಮಾಡೋ ಜನ ಅಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ.
ಬಿ.ಶ್ರೀರಾಮುಲು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಯಾಗಲಿದ್ದಾರೆ ಎಂಬ ಮಾಜಿ ಸಚಿವ ವಿ.ಸೋಮಣ್ಣ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರೇವಣ್ಣ, ಅವರೆಲ್ಲಿ ಸ್ವಾಮಿ ಸಿಎಂ ಮಾಡ್ತಾರೆ? ಹಾಗೆ ಒಂದು ವೇಳೆ ಬೇರೆಯವರಿಗೆ ಅಧಿಕಾರ ಕೊಡಬೇಕು ಎಂದು ಅಂದುಕೊಂಡಿದ್ದರೆ ಶಿವಮೊಗ್ಗದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ತನ್ನ ಮಗನನ್ನು ಏಕೆ ನಿಲ್ಲಿಸುತ್ತಿದ್ದರು? ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತಿದ್ದರಲ್ವೇ? ಬಿಜೆಪಿಯವರು ಮಾತನಾಡೋದು ಹೆಚ್ಚು, ಹೇಳಿದಂತೆ ಕೆಲಸ ಮಾಡೋ ಜನ ಅಲ್ಲ ಎಂದು ಪ್ರತಿಕ್ರಿಯಿಸಿದರು.
ನಾನು ವರ್ಗಾವಣೆ ದಂಧೆ ಮಾಡ್ತೀನಿ, ಸೂಟ್ಕೇಸ್ನಲ್ಲಿ ಹಣ ತಗೋಳ್ತೀನಿ ಎಂದು ಯಡಿಯೂರಪ್ಪ ಹೋದ ಕಡೆಯೆಲ್ಲ ಹೇಳುತ್ತಿದ್ದಾರೆ. ನಾನು ಯಾವ ವರ್ಗಾವಣೆ ದಂಧೆಯನ್ನೂ ಮಾಡಿಲ್ಲ. ಯಾರೂ ನನಗೆ ಸೂಟ್ಕೇಸ್ ಕೊಟ್ಟಿಲ್ಲ. ಯಡಿಯೂರಪ್ಪ ಅವರ ಅಳಿಯ ನನ್ನ ಇಲಾಖೆಯಲ್ಲೇ ಎಂಜಿನಿಯರ್ ಆಗಿದ್ದಾರೆ. ಅವರಿಗೂ ಪ್ರಮೋಷನ್ ಕೊಟ್ಟಿದ್ದೇವೆ. ಯಡಿಯೂರಪ್ಪ ಎಷ್ಟು ಸೂಟ್ಕೇಸ್ ಕೊಟ್ರು ಅಂತ ಅವರು ಹೇಳಲಿ ಎಂದು ಟಾಂಗ್ ನೀಡಿದರು.
ಈಶ್ವರಪ್ಪ ಕಾದು ಕುಳಿತಿದ್ದಾರೆ: ಯಡಿಯೂರಪ್ಪರನ್ನು ಸೋಲಿಸಲು ಪಕ್ಷದ ಇನ್ನೊಬ್ಬ ಮುಖಂಡ ಕೆ.ಎಸ್.ಈಶ್ವರಪ್ಪ ಕಾದು ಕುಳಿತಿದ್ದಾರೆ. ಮುಂಬರುವ ಚುನಾವಣೆಗಾಗಿ ಅವರು ಕಾಯುತ್ತಿದ್ದಾರೆ ಎಂದು ಇದೇ ವೇಳೆ ರೇವಣ್ಣ ಹೇಳಿದರು. ಈಶ್ವರಪ್ಪ ಹಾಗೂ ಯಡಿಯೂರಪ್ಪ ಮೇಲ್ನೋಟಕ್ಕೆ ಒಂದಾಗಿದ್ದಾರೆಂಬಂತೆ ಕಾಣಬಹುದು. ಆದರೆ, ಇಬ್ಬರ ನಡುವಿನಒಳ ಮುನಿಸು ಇನ್ನೂ ಬಗೆಹರಿದಿಲ್ಲ. ಯಡಿಯೂರಪ್ಪ ಸೋಲಿಸಲು ಈಶ್ವರಪ್ಪ ಅವರೇ ತುದಿಗಾಲಲ್ಲಿ ನಿಂತಿದ್ದಾರೆ ಎಂದರು.