ತಂತಿಯಿಂದ ಕೆಳಗಿಳಿಸುವ ಎಚ್ಚರಿಕೆ! ಬಿಎಸ್ವೈ ಕಾಲೆಳೆದ ಎಚ್ಡಿಕೆ
ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಿರುವ ‘ತಂತಿ’; ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿಕೆಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟಾಂಗ್; ಜನರೇ ನಿಮ್ಮನ್ನು 'ತಂತಿ' ಮೇಲಿಂದ ಇಳಿಸುತ್ತಾರೆ
ಬೆಂಗಳೂರು (ಸೆ.30): ದಸರಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಾನು ತಂತಿ ಮೇಲೆ ನಡೆಯುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ಭಾನುವಾರ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದರು.
"
ಈಗ ಅದಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಅತೃಪ್ತ ಶಾಸಕರನ್ನು ಅಡ್ಡ ದಾರಿಯಲ್ಲಿ ತೃಪ್ತಿಪಡಿಸಿ CM ಪದವಿಗೆ ಏರಿದ ಯಡಿಯೂರಪ್ಪನವರೇ ತಂತಿ ಮೇಲಿಂದನೇ ಪ್ರವಾಹ ಪೀಡಿತ ಪ್ರದೇಶದಲ್ಲಿರುವ ಜನರ ಕಡೆಗೂ ನೋಡಿ. ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿರುವ ಅವರ ಬದುಕನ್ನು ನಿಮ್ಮ ಸರ್ಕಾರಕ್ಕೆ ಕಟ್ಟಿ ಕೊಡೋಕೆ ಸಾಧ್ಯವಾಗದಿದ್ದರೆ, ಜನರೇ ನಿಮ್ಮನ್ನು 'ತಂತಿ' ಮೇಲಿಂದ ಇಳಿಸುತ್ತಾರೆ, ಎಂದು ಎಚ್ಡಿಕೆ ಟಾಂಗ್ ನೀಡಿದರು.
ಒಂದು ನಿರ್ಧಾರ ಕೈಗೊಳ್ಳಬೇಕೆಂದ್ರೂ 10 ಬಾರಿ ಯೋಚಿಸುವೆ. ಸಿಎಂ ಆಗಿದ್ರೂ ಒಂದು ರೀತಿ ತಂತಿ ಮೇಲೆ ನಡೆಯುವಂತಾಗಿದೆ ಎಂದು ಯಡಿಯೂರಪ್ಪ ಹೇಳಿದ್ದರು.
ಯಡಿಯೂರಪ್ಪ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಯಾವ ಮೈತ್ರಿಯ ಹಂಗೂ ಇಲ್ಲದೇ ಸಿಎಂ ಆಗಿರುವ ಯಡಿಯೂರಪ್ಪರಿಗೆ ಇಂತಹ ಅಸಹಾಯಕತೆ ಯಾಕೆ ಎಂಬ ಪ್ರಶ್ನೆಗಳು ಕೇಳಲಾಗುತ್ತಿದೆ.