ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನ್ಮ ದಿನದ ಪ್ರಯುಕ್ತ ಎಚ್ಡಿಕೆ ಅವರನ್ನು ಮನೆಗೆ ಆಹ್ವಾನಿಸಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸ್ವತಃ ಅಡುಗೆ ಮಾಡಿ ಉಣ ಬಡಿಸಿದ್ದಾರೆ.

ಬೆಂಗಳೂರು (ಡಿ.18): ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನ್ಮ ದಿನದ ಪ್ರಯುಕ್ತ ಎಚ್ಡಿಕೆ ಅವರನ್ನು ಮನೆಗೆ ಆಹ್ವಾನಿಸಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸ್ವತಃ ಅಡುಗೆ ಮಾಡಿ ಉಣ ಬಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಭಾನುವಾರ ಮಧ್ಯಾಹ್ನ ಸುದೀಪ್ ಮನೆಗೆ ಬಂದ ಕುಮಾರಸ್ವಾಮಿ ಅವರು ಸುಮಾರು ಎರಡು ತಾಸು ಸುದೀಪ್ ಮನೆಯಲ್ಲಿಯೇ ಕಾಲ ಕಳೆದಿದ್ದಾರೆ. ಈ ವೇಳೆ ಸುದೀಪ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದು, ಚರ್ಚೆ ನಡುವೆ ಅಡುಗೆ ಸಿದ್ಧಪಡಿಸಿ ಇಬ್ಬರು ಒಟ್ಟಿಗೇ ಊಟ ಸೇವಿಸಿದರು.

ಕುಮಾರಸ್ವಾಮಿ ಅವರ ಹುಟ್ಟು ಹಬ್ಬಕ್ಕೆ ಶನಿವಾರ ಶುಭ ಕೋರಿದ್ದ ಸುದೀಪ್, ಊಟಕ್ಕಾಗಿ ಮನೆಗೆ ಬರುವಂತೆ ಆಹ್ವಾನಿಸಿದ್ದರು. ಅವರ ಆಹ್ವಾನಕ್ಕೆ ಓಗೊಟ್ಟಿದ್ದ ಕುಮಾರಸ್ವಾಮಿ ಭಾನುವಾರ ಮಧ್ಯಾಹ್ನ ಸುದೀಪ್ ಮನೆಗೆ ಭೇಟಿ ನೀಡಿದರು.

ಕುಮಾರಸ್ವಾಮಿ ಅವರನ್ನು ಸಂತೋಷದಿಂದ ಸ್ವಾಗತಿಸಿದ ಸುದೀಪ್, ಸ್ವತಃ ಅಡುಗೆ ಸಿದ್ಧಪಡಿಸಿ ಬಡಿಸಿದರು. ಜೆಡಿಎಸ್ ವಿಧಾನಪರಿಷತ್ ಸದಸ್ಯರೂ ಆಗಿರುವ ಚಿತ್ರ ನಿರ್ಮಾಪಕ ಸಿ.ಆರ್. ಮನೋಹರ್ ಕೂಡ ಈ ವೇಳೆ ಉಪಸ್ಥಿತರಿದ್ದರು.