ಉತ್ತರದ ರಾಜ್ಯಗಳ ವಿಧಾನಸಭೆ ಚುನಾವಣೆಗೆ ರಾಜ್ಯದಲ್ಲಿ ಹಣ ಸಂಗ್ರಹ | ಕಾಂಗ್ರೆಸ್‌ಗೆ ಕರ್ನಾಟಕ ಹುಲ್ಲುಗಾವಲಿದ್ದಂತೆ: ಎಚ್‌ಡಿಕೆ ವಾಗ್ದಾಳಿ

ಬೆಂಗಳೂರು: ಮುಂದಿನ ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗೆ ಹಣ ಹೊಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಿಂದ ಹಣ ಲೂಟಿ ಮಾಡುತ್ತಿದ್ದು, ಕರ್ನಾಟಕ ಇವರ ಪಾಲಿಗೆ ಹುಲ್ಲುಗಾವಲಿನಂತಾಗಿದೆ’ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜೆ.ಪಿ.ನಗರದಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿ ಹೆಸರಲ್ಲಿ ರಾಜ್ಯ ಸರ್ಕಾರವು ಬೊಕ್ಕಸವನ್ನು ಖಾಲಿ ಮಾಡಿದೆ ಎಂದು ಆಪಾದಿಸಿದರು.

ರಾಜಕಾಲುವೆ ಹೂಳೆತ್ತಲು ನಿಗದಿಪಡಿಸಿದ ದರಕ್ಕಿಂತ ಶೇ.22ಕ್ಕಿಂತ ಹೆಚ್ಚಿನ ದರಕ್ಕೆ ಕಾಮಗಾರಿ ನೀಡಲಾಗಿದೆ. ಹೊಳೆತ್ತುವ ಕಾಮಗಾರಿಯನ್ನು ಆರು ಪ್ಯಾಕೇಜ್ ಮಾಡಿ ಅದರ ಹಣವನ್ನು ಉತ್ತರ ಪ್ರದೇಶದ ಚುನಾವಣಾ ಖರ್ಚಿಗೆ ವರ್ಗಾವಣೆ ಮಾಡಿದ್ದಾರೆ. ಇದೀಗ ಟೆಂಡರ್ ಶ್ಯೂರ್ ಸೇರಿದಂತೆ ಇತರೆ ಕಾರ್ಯಗಳ ಹೆಸರಲ್ಲಿ ಲೂಟಿ ಮಾಡಲಾಗುತ್ತಿದೆ. ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗೆ ಹಣ ಹೊಂದಿಸಲು ಕಾಂಗ್ರೆಸ್ ಸರ್ಕಾರ ರಾಜ್ಯದ ಖಜಾನೆಯನ್ನು ಲೂಟಿ ಮಾಡುತ್ತಿದೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಹುಲ್ಲುಗಾವಲು ಆಗಿದೆ ಎಂದು ಕಿಡಿ ಕಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಚ್.ವಿಶ್ವನಾಥ್, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಇದ್ದರು.