ಅವರಪ್ಪನಾಣೆ ಎಂದು ನಮ್ಮನ್ನೂ ಉದ್ದರಿಸಿ : ಸಿದ್ದರಾಮಯ್ಯಗೆ ರೈತನ ಮನವಿ
ಅಪ್ಪನಾಣೆ ಎನ್ನುವ ಸಿದ್ದರಾಮಯ್ಯ ಆಣೆ ಹಾಕಿ ನಮ್ಮನ್ನೂ ಉದ್ದರಿಸಲಿ ಎಂದು ರೈತರೋರ್ವರು ವ್ಯಂಗ್ಯದ ಮನವಿ ಮಾಡಿದ್ದಾರೆ.
ಹಾವೇರಿ [ಜು.25] : ರಾಜ್ಯದಲ್ಲಿ ದೋಸ್ತಿ ಸರ್ಕಾರ ಪತನವಾಗಿದೆ. ಅಧಿಕಾರದಿಂದ ಕೆಳಕ್ಕೆ ಇಳಿದ ದೋಸ್ತಿ ಪಾಳಯದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಇದೇ ವೇಳೆ ರೈತರೋರ್ವರು ವ್ಯಂಗ್ಯದ ರೀತಿಯ ಮನವಿಯೊಂದನ್ನು ಮಾಡಿದ್ದಾರೆ.
ಹಿಂದೆ ವಿಧಾನಸಭಾ ಚುನಾವಣಾ ಪ್ರಚಾರದ ಅವಧಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯಗೆ ರೈತ ವ್ಯಂಗ್ಯವಾಡಿದ್ದಾರೆ.
"ಅವರಪ್ಪನಾಣೆ" ಕುಮಾರಸ್ವಾಮಿ ಸಿಎಂ ಆಗಲ್ಲ ಎಂದು ಹೇಳಿದ್ದಿರಿ, ಅವರು ಮುಖ್ಯಮಂತ್ರಿಯಾದರು. ನಂತರ "ಅವರಪ್ಪನಾಣೆ" ಬಿಎಸ್ವೈ ಸಿಎಂ ಆಗಲ್ಲ ಎಂದಿದ್ದಿರಿ, ಅವರು ಮುಖ್ಯಮಂತ್ರಿಯಾಗುತ್ತಿದ್ದಾರೆ. ನಿಮ್ಮ ಆಣೆ ಮಾತುಗಳೆಲ್ಲಾ ಉಲ್ಟಾ ಹೊಡೆಯುತ್ತಿವೆ ಎಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ರೈತ ವೀರಣ್ಣ ಹಲಗೇರಿ ಹೇಳಿದ್ದಾರೆ.
ಈಗ "ಅವರಪ್ಪನಾಣೆ" ರೈತರೂ ಉದ್ಧಾರ ಆಗಲ್ಲ ಎನ್ನಿ, "ಅವರಪ್ಪನಾಣೆ" ಮಳೆನೇ ಬರಲ್ಲ, ಬರ ಬರುತ್ತದೆ ಎಂದು ಹೇಳಿ. ನಿಮ್ಮ ಮಾತಿನಿಂದನಾದರೂ ಮಳೆಯಾಗಿ, ರೈತರ ಉದ್ದಾರವಾಗಲಿ. ಕಂಗೆಟ್ಟ ನಮಗೆ ಮಳೆ ಆಸರೆ ನೀಡಲಿ ಎಂದಿ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.