10 ವರ್ಷಗಳ ನಂತರ ಮತ್ತೆ ಒಂದಾದ ಅಣ್ಣ ತಂಗಿ – ಹಾಸನದಲ್ಲೊಂದು ಸಿನಿಮೀಯ ಘಟನೆ
ಅವರಿಬ್ಬರು ಅಣ್ಣ ತಂಗಿ. ಹುಟ್ಟಿದ ಒಂದೆರಡು ವರ್ಷಗಳಲ್ಲಿ ಹೆತ್ತವರನ್ನು ಕಳೆದುಕೊಂಡರು. ಚಿಕ್ಕಮ್ಮನ ಬಳಿ ಇದ್ದ ಅವರನ್ನು ಆಕೆಯೂ ಕೂಡ ತ್ಯಜಿಸಿದಳು. ಅಣ್ಣ ಯಾರದೋ ಮನೆ ಸೇರಿದ . ತಂಗಿ ಇನ್ಯಾರದೊ ಮನೆ ಸೇರಿದಳು. ಆದರೆ ಬರೋಬ್ಬರಿ 10 ವರ್ಷಗಳ ನಂತರ ಒಬ್ಬರನ್ನೊಬ್ಬರು ಗುರುತಿಸಿಕೊಂಡು ಅಣ್ಣ ತಂಗಿಯಾಗಿ ಒಪ್ಪಿ - ಅಪ್ಪಿಕೊಂಡಿದ್ದಾರೆ. ಇದು ಹಾಸನದಲ್ಲಿ ನಡೆದಿರೋ ಅಪರೂಪದ ಘಟನೆಯಾಗಿದೆ.
ಬೆಂಗಳೂರು (ಜ.17): ಅವರಿಬ್ಬರು ಅಣ್ಣ ತಂಗಿ. ಹುಟ್ಟಿದ ಒಂದೆರಡು ವರ್ಷಗಳಲ್ಲಿ ಹೆತ್ತವರನ್ನು ಕಳೆದುಕೊಂಡರು. ಚಿಕ್ಕಮ್ಮನ ಬಳಿ ಇದ್ದ ಅವರನ್ನು ಆಕೆಯೂ ಕೂಡ ತ್ಯಜಿಸಿದಳು. ಅಣ್ಣ ಯಾರದೋ ಮನೆ ಸೇರಿದ . ತಂಗಿ ಇನ್ಯಾರದೊ ಮನೆ ಸೇರಿದಳು. ಆದರೆ ಬರೋಬ್ಬರಿ 10 ವರ್ಷಗಳ ನಂತರ ಒಬ್ಬರನ್ನೊಬ್ಬರು ಗುರುತಿಸಿಕೊಂಡು ಅಣ್ಣ ತಂಗಿಯಾಗಿ ಒಪ್ಪಿ - ಅಪ್ಪಿಕೊಂಡಿದ್ದಾರೆ. ಇದು ಹಾಸನದಲ್ಲಿ ನಡೆದಿರೋ ಅಪರೂಪದ ಘಟನೆಯಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರದ ಮಳಲಿ ಗ್ರಾಮದಲ್ಲಿ ಹುಟ್ಟಿ ಹೆತ್ತವರನ್ನು ಕಳೆದುಕೊಂಡು, ಬಂಧುಗಳಿಂದ ದೂರಾಗಿದ್ದ ಮಂಜುನಾಥ್ – ಭಾಗ್ಯ ಎಂಬ ಅಣ್ಣ ತಂಗಿ ಮತ್ತೆ ಒಂದಾಗಿದ್ದಾರೆ. ಅಣ್ಣಗೆ 16 ವರ್ಷ, ತಂಗಿಗೆ 13 ವರ್ಷವಾಗಿದೆ. ಹಾಸನದ ಮಕ್ಕಳ ಕಲ್ಯಾಣ ಸಮಿತಿ ಇವರಿಬ್ಬರು ಅಣ್ಣ ತಂಗಿಯರನ್ನು ಒಂದಾಗಿಸುವ ಕೆಲಸ ಮಾಡಿದೆ.
ಚಿಕ್ಕಮ್ಮನ ಮನೆ ತೊರೆದ ಬಳಿಕ ಅಣ್ಣ ಮಂಜುನಾಥ ಮಳಲಿ ಗೌಡೇಗೌಡರ ಮನೆ ಸೇರಿದ್ದ. ಅವರ ಮನೆಯ ಮಗನಂತೆಯೆ ಬೆಳೆದು ಎಸ್ಎಸ್ ಎಲ್’ಸಿ ವ್ಯಾಸಂಗ ಮಾಡುತ್ತಿದ್ದಾನೆ. ಇತ್ತ ತಂಗಿ ಭಾಗ್ಯ ಸಕಲೇಶಪುರದ ಕಾಫಿ ತೋಟದ ಮಾಲೀಕರ ಮನೆಯನ್ನು ಸೇರಿದ್ದಳು. ಶ್ರೀಮಂತರ ಮನೆಯಲ್ಲಿದ್ದರೂ ಕೂಡ ಜೀತದಾಳುವಿನಂತೆ ದುಡಿಯುತ್ತಿದ್ದ ಭಾಗ್ಯ ಚಿಕ್ಕವಯಸ್ಸಿನಲ್ಲಿ ಹೆಚ್ಚು ಕಷ್ಟಪಟ್ಟಿದ್ದಳು.
ಆದರೆ ಅವರ ಮನೆಯನ್ನು ತೊರೆದು ಬಂದು ಮಕ್ಕಳ ರಕ್ಷಣಾ ಸಮಿತಿಯನ್ನು ಸೇರಿದ್ದಳು. ಬಳಿಕ ಆಕೆಯ ಅಣ್ಣನನ್ನು ಪತ್ತೆ ಹಚ್ಚಿ ಇಬ್ಬರನ್ನು ಸೇರಿಸಲಾಗಿದೆ. ಈ ಘಟನೆ ಎಲ್ಲರಿಗೂ ಸಿನಿಮೀಯ ರೀತಿಯಲ್ಲಿ ಗೋಚರವಾಗಿದೆ.