‘ಚಸ್ಮಾ ಧರಿಸಿ ತೆಲುಗು ನಟರಂತೆ ರಾಮುಲು ಪೋಸ್’
ಶ್ರೀರಾಮುಲು ಅವರಿಗೆ ಕಲಾಪ ಗೊತ್ತಿಲ್ಲ. ಕಲಾಪದ ನಾನಾ ಅವಧಿಗಳ ಬಗೆಗೂ ಗೊತ್ತಿಲ್ಲ. ನಾಯಕರನ್ನು ಎಸ್ಟಿ ಪಟ್ಟಿಗೆ ಸೇರಿಸಿದ್ದು ಉಗ್ರಪ್ಪನವರೇ ಹೊರತು ಶ್ರೀರಾಮುಲು ಅಲ್ಲ. ಚಸ್ಮಾ ಹಾಕಿಕೊಂಡು ಫೋಸ್ ಕೊಡೋದಷ್ಟೇ ಅವರಿಗೆ ಗೊತ್ತು ಎಂದು ಎಚ್. ಆಂಜನೇಯ ಅವರು ಅಪಹಾಸ್ಯ ಮಾಡಿದ್ದಾರೆ.
ಕಂಪ್ಲಿ: ಬಿಜೆಪಿ ನಾಯಕ ಶ್ರೀರಾಮುಲು ಸಂಸತ್ತಿನಲ್ಲಿ ಎಂದೂ ರೈತರು, ಗಣಿ ಲೂಟಿ ಬಗ್ಗೆ ಮಾತನಾಡಿಯೇ ಇಲ್ಲ. ಕಣ್ಣಿಗೆ ಚಸ್ಮಾ ಹಾಕಿಕೊಂಡು ತೆಲುಗು ನಟರಂತೆ ಪೋಸು ಕೊಡುವುದಷ್ಟೆಅವರಿಗೆ ಗೊತ್ತು ಎಂದು ಮಾಜಿ ಸಚಿವ ಎಚ್.ಆಂಜನೇಯ ಟೀಕಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಶ್ರೀರಾಮುಲು ಅವರಿಗೆ ಕಲಾಪ ಗೊತ್ತಿಲ್ಲ. ಕಲಾಪದ ನಾನಾ ಅವಧಿಗಳ ಬಗೆಗೂ ಗೊತ್ತಿಲ್ಲ. ನಾಯಕರನ್ನು ಎಸ್ಟಿ ಪಟ್ಟಿಗೆ ಸೇರಿಸಿದ್ದು ಉಗ್ರಪ್ಪನವರೇ ಹೊರತು ಶ್ರೀರಾಮುಲು ಅಲ್ಲ. 371ಜೆ ಪ್ರಸ್ತಾಪವನ್ನು ಬಿಜೆಪಿ ಸರ್ಕಾರ ತಿರಸ್ಕರಿಸಿತ್ತು. ಬಿಜೆಪಿಗೆ ಹೈ-ಕ ಅಭಿವೃದ್ಧಿ ಬೇಕಾಗಿರಲಿಲ್ಲ. ಶ್ರೀರಾಮುಲು ಅವರಷ್ಟಕ್ಕವರೇ ನಾಯಕರು ಎಂದುಕೊಂಡಿದ್ದಾರೆ ಎಂದು ಮೂದಲಿಸಿದರು.
ಶ್ರೀರಾಮುಲು ಬಿಜೆಪಿಯ ನಾಯಕರಾಗಿದ್ದರೆ ಪ್ರಧಾನಿ ಮೋದಿಯವರು ಈ ನಾಲ್ಕೂವರೆ ವರ್ಷಗಳಲ್ಲಿ ಅವರನ್ನು ಕೇಂದ್ರ ಮಂತ್ರಿಗಳನ್ನಾಗಿ ಮಾಡುತ್ತಿದ್ದರು. ಅವರು ಮುಂದಿನ ಉಪ ಮುಖ್ಯಮಂತ್ರಿ ಎನ್ನುವುದೇ ಅಪಹಾಸ್ಯಕರ. ಶ್ರೀರಾಮುಲು ಅವರನ್ನು ಮುಂದಿನ ಉಪ ಮುಖ್ಯಮಂತ್ರಿ ಎಂದು ಘೋಷಿಸುವ ಮೂಲಕ ಬಿಜೆಪಿಯು ನಾಯಕ ಸಮುದಾಯದವರನ್ನು ಅಪಹಾಸ್ಯ ಮಾಡಿದೆ. ಶ್ರೀರಾಮುಲು ಅವರಿಗೆ 307, 420 ಸೆಕ್ಷನ್ ಗೊತ್ತಿದೆ ವಿನಃ 371ಜೆ ಗೊತ್ತಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ತಿರುಚಲಾಗಿದೆ ಎಂದು ತಿಳಿಸಿದರು.